ಪೆಗಾಸಸ್ ಕುರಿತಾದ ತನ್ನ ಅರ್ಜಿಯನ್ನು ಮರು ಪರಿಶೀಲಿಸಲು ಮಾಜಿ ಆರೆಸ್ಸೆಸ್ ನಾಯಕನಿಂದ ಸುಪ್ರೀಂಗೆ ಮನವಿ
ಹೊಸದಿಲ್ಲಿ: ಪೆಗಾಸಸ್ ಸ್ಪೈವೇರ್ ಬಳಸಿ ನಡೆಸಲಾಗಿದೆಯೆನ್ನಲಾದ ಬೇಹುಗಾರಿಕೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸುವಂತೆ ಕೋರಿ ತಾವು 2019ರಲ್ಲಿ ಸಲ್ಲಿಸಿದ್ದ ಹಾಗೂ ನಂತರ ವಾಪಸ್ ಪಡೆದಿದ್ದ ಅರ್ಜಿಯನ್ನು ಮತ್ತೆ ಸಕ್ರಿಯಗೊಳಿಸಲು ಅನುಮತಿ ಕೋರಿ ಹಿರಿಯ ಆರೆಸ್ಸೆಸ್ ನಾಯಕ ಕೆ.ಎನ್ ಗೋವಿಂದಾಚಾರ್ಯ ಸುಪ್ರೀಂ ಕೋರ್ಟಿನ ಕದ ತಟ್ಟಿದ್ದಾರೆ.
ವಾಟ್ಸ್ಯಾಪ್, ಫೇಸ್ಬುಕ್ ಮತ್ತು ಪೆಗಾಸಸ್ ಸ್ಪೈವೇರ್ ತಯಾರಕ ಸಂಸ್ಥೆ ಎನ್ಎಸ್ಒ ಗ್ರೂಪ್ ವಿರುದ್ಧ ಎನ್ಐಎ ತನಿಖೆ ನಡೆಸಬೇಕೆಂದು ಗೋವಿಂದಾಚಾರ್ಯರ ಈ ಹಿಂದಿನ ಅರ್ಜಿಯಲ್ಲಿ ಕೋರಲಾಗಿತ್ತು.
"ಭಾರತದಲ್ಲಿ ಪೆಗಾಸಸ್ ಬಳಕೆಯ ಪ್ರಮಾಣ ಹಾಗೂ ಅದಕ್ಕೆ ಕಾರಣವಾದ ಸಂಸ್ಥೆಗಳ ಕುರಿತಂತೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು" ಎಂದು ಗೋವಿಂದಾಚಾರ್ಯ ಅವರು ಇದೀಗ ದಾಖಲಿಸಿರುವ ಅರ್ಜಿಯಲ್ಲಿ ಕೋರಿದ್ದಾರೆ.
ಪೆಗಾಸಸ್ ಸ್ಪೈವೇರ್ ಬಳಸಿ ಭಾರತದ ಹಲವು ಹೋರಾಟಗಾರರು ಮತ್ತು ವಕೀಲರ ಫೋನುಗಳನ್ನು ಹ್ಯಾಕ್ ಮಾಡಲಾಗಿದೆ ಎಂದು 2019ರಲ್ಲಿ ಹೊರಬಂದ ಸುದ್ದಿಯ ನಂತರ ಗೋವಿಂದಾಚಾರ್ಯ ತನಿಖೆಗೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು.