ನೆರೆಯ ಗ್ರಾಮದ ಜಲಾಶಯದಲ್ಲಿ ಮೀನು ಹಿಡಿಯುತ್ತಿದ್ದ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು
ರಾಂಚಿ : ಹತ್ತಿರದ ಗ್ರಾಮದ ಜಲಾಶಯವೊಂದರಲ್ಲಿ ಮೀನು ಹಿಡಿಯುತ್ತಿದ್ದ 45 ವರ್ಷದ ವ್ಯಕ್ತಿಯೊಬ್ಬನನ್ನು ಗುಂಪೊಂದು ಥಳಿಸಿ ಸಾಯಿಸಿದ ಘಟನೆ ಜಾರ್ಖಂಡ್ನ ಪಲಮು ಜಿಲ್ಲೆಯಲ್ಲಿ ಸೋಮವಾರ ರಾತ್ರಿ ವರದಿಯಾಗಿದೆ.
ಬೊಕ್ಯಾ ಗ್ರಾಮದ ಜನೇಶ್ವರ್ ಚೌಧುರಿ ಎಂಬಾತನ ಮೇಲೆ ನೆರೆಯ ಕತೌಲ್ ಗ್ರಾಮದ ಜನರ ಒಂದು ಗುಂಪು ಥಳಿಸಿದೆಯೆಂದು ಆರೋಪಿಸಲಾಗಿದೆ. ತಮ್ಮ ಗ್ರಾಮದ ಜಲಾಶಯದಲ್ಲಿ ಏಕೆ ಮೀನು ಹಿಡಿಲು ಆತ ಬಂದಿದ್ದಾನೆಂಬುದೇ ಅವರ ಪ್ರಶ್ನೆಯಾಗಿತ್ತು. ಈ ಗ್ರಾಮದ ಜನರು ಈ ನೀರಿನಲ್ಲಿ ಮೀನಿನ ಮರಿಗಳನ್ನು ಬಿಡುಗಡೆಗೊಳಿಸಿ ನಂತರ ಮೀನುಗಾರಿಕೆ ನಡೆಸಿ ಮೀನುಗಳನ್ನು ಹರಾಜು ಹಾಕುತ್ತಿದ್ದರೆಂದು ಹೇಳಲಾಗಿದೆ.
ಚೌಧುರಿ ಮನೆಗೆ ವಾಪಸಾಗದೇ ಇದ್ದಾಗ ಆತನ ಕುಟುಂಬ ಆತನಿಗಾಗಿ ಹುಡುಕಲು ಆರಂಭಿಸಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ನಂತರ ಕುಟುಂಬಕ್ಕೆ ಹಸ್ತಾಂತರಿಸಲಾಗಿತ್ತು. ನಂತರ ಆತನ ಸ್ಥಿತಿ ಬಿಗಡಾಯಿಸಿದಾಗ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಅಲ್ಲಿ ಸಾವನ್ನಪ್ಪಿದ್ದ.
ಘಟನೆ ಸಂಬಂಧ ಬಿಂದು ಚೌರಾಸಿಯಾ ಎಂಬಾತನನ್ನು ಬಂಧಿಸಲಾಗಿದ್ದು ಇತರ ಆರೋಪಿಗಳಾದ ಮನ್ಸೋಖ್ ಚೌರಾಸಿಯ, ಬಸಿಷ್ಠ್ ಚೌರಾಸಿಯ ಮತ್ತು ಅರುಪ್ ಚೌರಾಸಿಯಾ ಅವರು ತಲೆಮರೆಸಿಕೊಂಡಿದ್ದಾರೆ.