ಆರೆಸ್ಸೆಸ್ ಅಂಗಸಂಸ್ಥೆ ಭಾರತೀಯ ಕಿಸಾನ್ ಸಂಘದಿಂದ ಸೆ.8ರಿಂದ ಕೃಷಿ ಕಾನೂನುಗಳ ವಿರುದ್ಧ ರಾಷ್ಟ್ರವ್ಯಾಪಿ ಧರಣಿ
photo: sarkarimanthan.com/
ಬಲಿಯಾ: ಕೇಂದ್ರ ಸರಕಾರವು ಮೂರು ಹೊಸ ಕೃಷಿ ಕಾನೂನುಗಳು ಮತ್ತು ಎಂಎಸ್ಪಿಗೆ ಸಂಬಂಧಿಸಿದಂತೆ ಆಗಸ್ಟ್ 31 ರೊಳಗೆ ಬೇಡಿಕೆಗಳನ್ನು ಪರಿಗಣಿಸಲು ವಿಫಲವಾಗಿರುವ ಕಾರಣ ಆರೆಸ್ಸೆಸ್ ಅಂಗಸಂಸ್ಥೆ ಭಾರತೀಯ ಕಿಸಾನ್ ಸಂಘ (ಬಿಕೆಎಸ್) ಸೆಪ್ಟೆಂಬರ್ 8 ರಂದು ರಾಷ್ಟ್ರವ್ಯಾಪಿ ಸಾಂಕೇತಿಕ ಧರಣಿ ನಡೆಸಲು ನಿರ್ಧರಿಸಿದೆ.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್ಪಿ) ವೆಚ್ಚದ ಆಧಾರದಲ್ಲಿ ನಿರ್ಧರಿಸಬೇಕು ಹಾಗೂ ಹೊಸ ಕೃಷಿ ಕಾನೂನುಗಳಿಂದ ಉಂಟಾದ ವಿವಾದವನ್ನು ಬಗೆಹರಿಸಲು ರೈತರು ಎತ್ತಿರುವ ಕಾಳಜಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು ಹೊಸ ಕಾನೂನು ರೂಪಿಸಬೇಕು ಎಂದು ಬಿಕೆಎಸ್ ಆಗ್ರಹಿಸಿದೆ.
ನರೇಂದ್ರ ಮೋದಿ ಸರಕಾರವು ರೈತರ ಬೇಡಿಕೆಗಳ ಈಡೇರಿಕೆಗೆ ಆಗಸ್ಟ್ 31ರ ತನಕ ಸಮಯ ನೀಡಿತ್ತು. ಸರಕಾರದಿಂದ ಈ ತನಕ ಸಕಾರಾತ್ಮಕ ಸೂಚನೆಗಳು ಬಂದಿಲ್ಲ. ಸೆಪ್ಟಂಬರ್ 8ರಂದು ನಾವು ಧರಣಿ ನಡೆಸಲಿದ್ದೇವೆ. ರೈತರ ಸಂಕಷ್ಟಗಳ ಬಗ್ಗೆ ಜನರಿಗೆ ತಿಳಿಸಲು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆ ದಿನ ಪತ್ರಿಕಾಗೋಷ್ಠಿಗಳನ್ನು ನಡೆಸಲಾಗುವುದು. ಸೆಪ್ಟೆಂಬರ್ 8 ರ ನಂತರ ನಾವು ಮುಂದಿನ ಕ್ರಮವನ್ನು ನಿರ್ಧರಿಸುತ್ತೇವೆ" ಎಂದು ಬಿಕೆಎಸ್ ಖಜಾಂಚಿ ಯುಗಲ್ ಕಿಶೋರ್ ಮಿಶ್ರಾ ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.