ಆರೋಪಗಳನ್ನು ರೂಪಿಸುವಾಗ ಬೇರೆ ಎಫ್ಐಆರ್ ನಲ್ಲಿಯ ಹೇಳಿಕೆಗಳನ್ನು ಸೇರಿಸಿದ್ದಕ್ಕಾಗಿ ಪೊಲೀಸರಿಗೆ ನ್ಯಾಯಾಲಯದ ತರಾಟೆ
ದಿಲ್ಲಿ ಹಿಂಸಾಚಾರ
ಹೊಸದಿಲ್ಲಿ,ಸೆ.6: ಕಳೆದ ವರ್ಷ ಈಶಾನ್ಯ ದಿಲ್ಲಿಯಲ್ಲಿ ಸಂಭವಿಸಿದ್ದ ಕೋಮು ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಗುಲ್ಫಾಮ್ ಎಂಬಾತನ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಇಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು,ಆರೋಪಿಯ ವಿರುದ್ಧ ಆರೋಪಗಳನ್ನು ರೂಪಿಸುವಾಗ ಬೇರೊಂದು ಎಫ್ಐಆರ್ನಲ್ಲಿಯ ಹೇಳಿಕೆಗಳನ್ನು ‘ಆಮದು ’ಮಾಡಿಕೊಂಡಿದ್ದಕ್ಕಾಗಿ ದಿಲ್ಲಿ ಪೊಲೀಸರನ್ನು ತೀವ್ರ ತರಾಟೆಗೆತ್ತಿಕೊಂಡಿದೆ.
2020,ಮೇ 8ರಂದು ಎಫ್ಐಆರ್ 86/2020ಕ್ಕೆ ಸಂಬಂಧಿಸಿದಂತೆ ದಾಖಲಿಸಲಾಗಿರುವ ಆರೋಪಗಳ ಕುರಿತು ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ ಗುಲ್ಫಾಮ್ ನೀಡಿದ್ದ ಹೇಳಿಕೆಯ ಆಧಾರದಲ್ಲಿ ಆತನನ್ನು ಬಂಧಿಸಲಾಗಿತ್ತು. ಆದರೆ ಪೊಲೀಸರು ಆತನ ವಿರುದ್ಧ ಎಫ್ಐಆರ್ 90/2020ರಡಿ ಐಪಿಸಿಯ ಕಲಂ 436ರಡಿ ಆರೋಪಗಳನ್ನು ಹೊರಿಸಿದ್ದರು.
ಪ್ರಾಸಿಕ್ಯೂಷನ್ ಅಧಿಕಾರಿಗಳು ಎಫ್ಐಆರ್ 86/2020ರಡಿಯ ಸಾಕ್ಷಿಗಳ ಹೇಳಿಕೆಗಳನ್ನು ತೆಗೆದುಕೊಂಡು ಈಗ ವಿಚಾರಣೆ ನಡೆಯುತ್ತಿರುವ ಎಫ್ಐಆರ್ 90/2020ರಡಿಯ ಪ್ರಕರಣದಲ್ಲಿ ಅವುಗಳನ್ನು ಅನ್ವಯಿಸಿರುವುದು ಗ್ರಹಿಕೆಗೆ ಮೀರಿದೆ ಎಂದು ನ್ಯಾ.ವಿನೋದ ಯಾದವ ಅವರು ಟೀಕಿಸಿದರು.
ಪೊಲೀಸರು ಬೇರೊಂದು ಎಫ್ಐಆರ್ನಿಂದ ಹೇಳಿಕೆಗಳನ್ನು ಆಮದು ಮಾಡಿಕೊಂಡಿರುವುದು ಭಾರತೀಯ ಸಂವಿಧಾನದ ವಿಧಿ 20(2)ರಡಿ ತನ್ನ ಕಕ್ಷಿದಾರನ ಹಕ್ಕುಗಳನ್ನು ಉಲ್ಲಂಘಿಸಿದೆ. ಯಾವುದೇ ವ್ಯಕ್ತಿಯ ವಿರುದ್ಧ ಅದೇ ಅಪರಾಧಕ್ಕಾಗಿ ಒಂದಕ್ಕಿಂತ ಹೆಚ್ಚು ಬಾರಿ ಕಾನೂನು ಕ್ರಮ ಕೈಗೊಳ್ಳುವಂತಿಲ್ಲ ಅಥವಾ ದಂಡಿಸುವಂತಿಲ್ಲ ಎಂದು ಈ ವಿಧಿಯು ಸ್ಪಷ್ಟಪಡಿಸಿದೆ ಎಂದು ಗುಲ್ಫಾಮ್ ಪರ ವಕೀಲ ಅನೀಸ್ ಮುಹಮ್ಮದ್ ಅವರು ನ್ಯಾಯಾಲಯಕ್ಕೆ ನಿವೇದಿಸಿಕೊಂಡರು.
ಈ ಉಲ್ಲಂಘನೆಯನ್ನು ತಳ್ಳಿ ಹಾಕಿದರೂ ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಅವು ಇದ್ದ ಹಾಗೆಯೇ ಪರಿಗಣಿಸಿದರೂ ಪ್ರಕರಣದಲ್ಲಿ ಕಲಂ 436ರ ಯಾವುದೇ ಅಂಶಗಳಿಲ್ಲ ಎಂದು ಬೆಟ್ಟು ಮಾಡಿದ ನ್ಯಾಯಾಧೀಶರು,ಸದ್ರಿ ಕಲಮ್ನಡಿಯ ಆರೋಪಗಳಿಂದ ಗುಲ್ಫಾಮ್ನನ್ನು ಮುಕ್ತಗೊಳಿಸಿದರು. ಆದರೆ ಗುಲ್ಫಾಮ್ ವಿರುದ್ಧ ಐಪಿಸಿಯ 147,148,149 ಮತ್ತು 120(ಬಿ) ಕಲಮ್ಗಳಡಿ ದಾಖಲಾಗಿರುವ ಇತರ ಆರೋಪಗಳನ್ನು ಎತ್ತಿ ಹಿಡಿದ ಅವರು,ಇವುಗಳನ್ನು ಮುಖ್ಯ ಮಹಾನಗರ ನ್ಯಾಯಾಧೀಶರು ವಿಚಾರಣೆ ನಡೆಸಬಹುದು ಎಂದು ತಿಳಿಸಿದರು.