ಕರ್ನಾಲ್: ಮೂರನೇ ದಿನವೂ ಮುಂದುವರಿದ ರೈತರ ಪ್ರತಿಭಟನೆ
photo: twitter/@Chhotalikharii
ಚಂಡಿಗಡ,ಸೆ.9: ಕರ್ನಾಲ್ನ ಮಿನಿ ಸಚಿವಾಲಯದ ಹೊರಗೆ ರೈತರು ನಡೆಸುತ್ತಿರುವ ಪ್ರತಿಭಟನೆ ಗುರುವಾರ ಮೂರನೇ ದಿನಕ್ಕೆ ಕಾಲಿರಿಸಿದ್ದು,ಹರ್ಯಾಣ ಸರಕಾರವು ಮೊಬೈಲ್ ಅಂತರ್ಜಾಲ ಮತ್ತು ಎಸ್ಎಂಎಸ್ ಸೇವೆಯ ಮೇಲೆ ಮಂಗಳವಾರದಿಂದ ಹೇರಲಾಗಿರುವ ನಿಷೇಧವನ್ನು ಇಂದು ಮಧ್ಯರಾತ್ರಿಯವರೆಗೆ ವಿಸ್ತರಿಸಿದೆ. ನಿಷೇಧ ಇನ್ನಷ್ಟು ಅವಧಿಗೆ ವಿಸ್ತರಣೆಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.
ಆ.28ರಂದು ಕರ್ನಾಲ್ನಲ್ಲಿ ಬಿಜೆಪಿ ಸಭೆಯ ವಿರುದ್ಧ ಪ್ರತಿಭಟಿಸಲು ತೆರಳುತ್ತಿದ್ದ ರೈತರ ಮೇಲೆ ಲಾಠಿಪ್ರಹಾರ ನಡೆಸಿದ್ದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.
ಬುಧವಾರ ತಮ್ಮ ಬೇಡಿಕೆಗಳ ಕುರಿತು ಚರ್ಚಿಸಲು ರೈತ ನಾಯಕರು ಕರ್ನಾಲ್ ಜಿಲ್ಲಾಡಳಿತದ ಜೊತೆಗೆ ಮಾತುಕತೆಗಳನ್ನು ನಡೆಸಿದ್ದರು. ಮೂರು ಗಂಟೆ ಕಾಲ ನಡೆದ ಸಭೆಯ ಬಳಿಕ ಮಾತುಕತೆಗಳು ಅಪೂರ್ಣವಾಗಿವೆ ಎಂದು ಸುದ್ದಿಗಾರರಿಗೆ ತಿಳಿಸಿದ್ದ ಬಿಕೆಯು ನಾಯಕ ರಾಕೇಶ್ ಟಿಕಾಯತ್ ಅವರು,ಕರ್ನಾಲ್ನಲ್ಲಿ ಧರಣಿ ಮುಂದುವರಿಯಲಿದೆ ಮತ್ತು ಬೇಡಿಕೆಯು ಈಡೇರದಿದ್ದರೆ ಉ.ಪ್ರದೇಶ,ಪಂಜಾಬ್ ಮತ್ತು ಇತರ ಕಡೆಗಳಿಂದ ಇನ್ನಷ್ಟು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದರು.
ಪ್ರತಿಭಟನಾಕಾರರು ಸ್ಥಳದಲ್ಲಿ ಟೆಂಟ್ಗಳನ್ನು ಸ್ಥಾಪಿಸಿದ್ದು,ಸಮುದಾಯ ಭೋಜನಗೃಹಗಳನ್ನೂ ವ್ಯವಸ್ಥೆ ಮಾಡಿದ್ದಾರೆ. ಪ್ರತಿಭಟನಾ ಸ್ಥಳದ ಸುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು,ಸ್ವಯಂಸೇವಕರು ಜನರ ಚಲನವಲನಗಳ ಮೇಲೆ ನಿಗಾಯಿರಿಸಿದ್ದಾರೆ.