ಮಧ್ಯಪ್ರದೇಶ: ಸಾಲ ಮರು ಪಾವತಿಸಲಾಗದೇ ರೈತ ಆತ್ಮಹತ್ಯೆ
ಖರ್ಗೋನೆ (ಮಧ್ಯಪ್ರದೇಶ), ಸೆ. 11: ಬೆಳೆ ಹಾನಿ ಹಾಗೂ ಸಾಲ ಮರು ಪಾವತಿಸಲು ಸಾಧ್ಯವಾಗದೆ 37 ವರ್ಷದ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಖರೋಗನ ಜಿಲ್ಲೆಯಲ್ಲಿ ಸಂಭವಿಸಿದೆ. ರೈತ ಜಿತೇಂದ್ರ ಪಾಟಿದಾರ್ ಅವರ ಮೃತದೇಹ ಪಾಂಧನಿಯ ಗ್ರಾಮದ ಹೊಲದಲ್ಲಿರುವ ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೇಂಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿಯನ್ನು ಶುಕ್ರವಾರ ಸಂಜೆ ನಾವು ಮಾಹಿತಿ ಸ್ವೀಕರಿಸಿದ್ದೆವು. ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳ ತಂಡ ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿತು ಎಂದು ಉಪ ವಿಭಾಗೀಯ ದಂಡಾಧಿಕಾರಿ (ಎಸ್ ಡಿಎಂ) ಸತ್ಯೇಂದ್ರ ಸಿಂಗ್ ತಿಳಿಸಿದ್ದಾರೆ.
ಜಿತೇಂದ್ರ ಪಾಟಿದಾರ್ ಅವರಿಗೆ ಉಂಟಾದ ಬೆಳೆ ಹಾನಿ ಹಾಗೂ ಸಾಲದ ಹೊರೆಯ ಬಗೆಗಿನ ಕುಟುಂಬದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ತನಿಖೆಯ ಬಳಿಕ ಕಾರಣ ಸ್ಪಷ್ಟವಾಗಲಿದೆ ಎಂದರು.
ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಜಿಲ್ಲೆಯಲ್ಲಿ ಕಡಿಮೆ ಮಳೆಯಾಗಿದೆ. ಆದರೆ ಇತ್ತೀಚೆಗೆ ಉತ್ತಮ ಮಳೆ ಸುರಿದಿತ್ತು. ರೈತನ ಕುಟುಂಬ 18 ಎಕರೆ ಭೂಮಿ ಹೊಂದಿದೆ ಸಿಂಗ್ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ರೈತನ ಮೃತದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಸುದ್ದಿಗಾರರೊಂದಿಗೆ ಮಾತನಾಡಿದ ಜಿತೇಂದ್ರ ಪಾಟಿದಾರ್ ಅವರ ಮಾವ ಭಗವಾನ್ ಪಾಟೀದಾರ್, ಆತ್ಮಹತ್ಯೆ ಮಾಡುವ ಮುನ್ನ ಜಿತೇಂದ್ರ ಪಾಟಿದಾರ್ ತನ್ನೊಂದಿಗೆ ಮಾತನಾಡಿದ್ದಾನೆ. ಸಾಲದ ಹೊರೆ ಹೆಚ್ಚಾಗಿರುವುದು ಹಾಗೂ ಬೆಳೆ ಹಾನಿಯ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾನೆ ಎಂದಿದ್ದಾರೆ.