ಉತ್ತರಪ್ರದೇಶ: ಬಿಜೆಪಿ ನಾಯಕನ ಮೃತದೇಹ ಪತ್ತೆ
ಮೀರತ್,ಸೆ. 11: ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಆತ್ಮಾರಾಮ್ ತೋಮರ್ (75) ಅವರ ಮೃತದೇಹ ಬಾಗಪತ್ ಪಟ್ಟಣದ ಬೇರೌತ್ನಲ್ಲಿರುವ ಅವರ ಮನೆಯಲ್ಲಿ ಗುರುವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿ ತೀರಿಕೊಂಡ ಬಳಿಕ ಅವರು ಇಲ್ಲಿ ಏಕಾಂಗಿಯಾಗಿ ಜೀವಿಸುತ್ತಿದ್ದರು. ಅವರು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅವರ ಇಬ್ಬರು ಪುತ್ರದಲ್ಲಿ ಓರ್ವ ಮೀರತ್ನಲ್ಲಿ ವೈದ್ಯನಾಗಿದ್ದರೆ, ಇನ್ನೋರ್ವ ಅಮೆರಿಕದಲ್ಲಿ ನೆಲೆಸಿದ್ದಾರೆ.
ಗುರುವಾರ ಸಂಜೆ ಇಬ್ಬರು ಅಪರಿಚಿತ ವ್ಯಕ್ತಿಗಳು ತೋಮರ್ ಅವರ ನಿವಾಸ ಪ್ರವೇಶಿಸುತ್ತಿರುವುದು ಹಾಗೂ ಗಂಟೆಗಳ ಬಳಿಕ ಹಿಂದಿರುಗುತ್ತಿರುವುದು ಸುತ್ತಮುತ್ತ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತೋಮರ್ ಅವರ ಹಿರಿಯ ಪುತ್ರ ಸತ್ಯಪ್ರಕಾಸ್ ಸಲ್ಲಿಸಿದ ದೂರಿನ ಆಧಾರದಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಕುಟುಂಬದ ಹತ್ತಿರದ ಸಂಬಂಧಿಗಳು ಅವರೊಂದಿಗೆ ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಹೊಂದಿದ್ದರು. ಸಾವಿಗೂ ಇದಕ್ಕೂ ಸಂಬಂಧ ಇದೆ ಎಂದು ಅವರು ಆರೋಪಿಸಿದ್ದರು.