ಆಮ್ ಆದ್ಮಿ ಪಕ್ಷಕ್ಕೆ ಈಡಿ ನೋಟಿಸ್: ಬಿಜೆಪಿಯ ತಂತ್ರಗಳು ನಮ್ಮನ್ನು ಬಲಪಡಿಸುತ್ತದೆ ಎಂದ ಕೇಜ್ರಿವಾಲ್
ಹೊಸದಿಲ್ಲಿ: ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಪಂಕಜ್ ಗುಪ್ತಾ ಅವರಿಗೆ ಜಾರಿ ನಿರ್ದೇಶನಾಲಯದ(ಈಡಿ)ನೋಟಿಸ್ ಕುರಿತು ಸೋಮವಾರ ತೀವ್ರವಾಗಿ ಪ್ರತಿಕ್ರಿಯಿಸಿರುವ ದಿಲ್ಲಿ ಮುಖ್ಯಮಂತ್ರಿ ಹಾಗೂ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಬಿಜೆಪಿಯ ಇಂತಹ ತಂತ್ರಗಳು ಎಂದಿಗೂ ಯಶಸ್ವಿಯಾಗುವುದಿಲ್ಲ ಹಾಗೂ ಇದು ನಮ್ಮ ಪಕ್ಷವನ್ನು ಬಲಪಡಿಸುತ್ತದೆ ಎಂದು ಹೇಳಿದರು.
"ದಿಲ್ಲಿಯಲ್ಲಿ ಅವರು ನಮ್ಮನ್ನು ಐಟಿ ವಿಭಾಗ, ಸಿಬಿಐ, ದಿಲ್ಲಿ ಪೋಲಿಸ್ ಮೂಲಕ ಸೋಲಿಸಲು ಪ್ರಯತ್ನಿಸಿದರು. ಆದರೆ ನಾವು 62 ಸ್ಥಾನಗಳನ್ನು ಗೆದ್ದೆವು. ನಾವು ಪಂಜಾಬ್, ಗೋವಾ, ಉತ್ತರಾಖಂಡ, ಗುಜರಾತ್ನಲ್ಲಿ ಬೆಳೆಯುತ್ತಿದ್ದಂತೆ ನಮಗೆ ಈಡಿ ನೋಟಿಸ್ ಸಿಗುತ್ತದೆ! ಭಾರತದ ಜನರು ಪ್ರಾಮಾಣಿಕ ರಾಜಕೀಯವನ್ನು ಬಯಸುತ್ತಾರೆ. ಬಿಜೆಪಿಯ ಈ ತಂತ್ರಗಳು ಎಂದಿಗೂ ಯಶಸ್ವಿಯಾಗುವುದಿಲ್ಲ. ಅದು ನಮ್ಮನ್ನು ಬಲಪಡಿಸುತ್ತದೆ "ಎಂದು ಅವರು ಟ್ವೀಟ್ ಮಾಡಿದ್ದಾರೆ.
ಪಕ್ಷವು ಜಾರಿ ನಿರ್ದೇಶನಾಲಯದಿಂದ ನೋಟಿಸ್ ಪಡೆದಿದೆ ಎಂದು ಆಮ್ ಆದ್ಮಿ ಪಕ್ಷದ ಶಾಸಕ ರಾಘವ್ ಚಡ್ಡಾ ಹೇಳಿದ ನಂತರ ಈ ಹೇಳಿಕೆಗಳು ಬಂದಿವೆ.
"ಮೊದಲ ಬಾರಿ ಆಮ್ ಆದ್ಮಿ ಪಕ್ಷವು ಮೋದಿ ಸರಕಾರದ ನೆಚ್ಚಿನ ಸಂಸ್ಥೆ - ಜಾರಿ ನಿರ್ದೇಶನಾಲಯದಿಂದ ಪ್ರೇಮ ಪತ್ರವನ್ನು ಪಡೆದಿದೆ" ಎಂದು ಚಡ್ಡಾ ಟ್ವೀಟ್ ಮಾಡಿದ್ದಾರೆ.