ಹೈದರಾಬಾದ್ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿ ರೈಲ್ವೆ ಹಳಿಯಲ್ಲಿ ಶವವಾಗಿ ಪತ್ತೆ
Photo: Twitter/@TelanganaDGP
ಹೈದರಾಬಾದ್: ಹೈದರಾಬಾದ್ನಲ್ಲಿ ಆರು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಇಂದು ಬೆಳಗ್ಗೆ ತೆಲಂಗಾಣದ ಘನಾಪುರ ರೈಲ್ವೆ ನಿಲ್ದಾಣದ ಸಮೀಪದ ಹಳಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ತೆಲಂಗಾಣದ ಸಚಿವರೊಬ್ಬರು ‘ಎನ್ಕೌಂಟರ್' ಎಚ್ಚರಿಕೆ ನೀಡಿದ ಎರಡು ದಿನಗಳಲ್ಲಿ ಈ ಘಟನೆ ಸಂಭವಿಸಿದೆ. ಆರೋಪಿ ತಪ್ಪಿಸಿಕೊಳ್ಳುವ ಯತ್ನದಲ್ಲಿ ಚಲಿಸುತ್ತಿರುವ ರೈಲಿನೆದುರು ಹಾರಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ದೃಢೀಕರಿಸಿದ್ದಾರೆ. ಪೊಲೀಸರು ಆತನನ್ನು ಬೆನ್ನಟ್ಟಿದ್ದ ಸಂದರ್ಭ ಆತ ಎಚ್ಚರಿಕೆಗಳಿಗೆ ಕಿವಿಗೊಡದೆ ಹಳಿಗೆ ಹಾರಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಆರೋಪಿಯನ್ನು 30 ವರ್ಷದ ಪಲ್ಲಕೊಂಡ ರಾಜು ಎಂದು ಗುರುತಿಸಲಾಗಿದೆ. ಸೆಪ್ಟೆಂಬರ್ 9ರಂದು ಅತ್ಯಾಚಾರ, ಕೊಲೆ ಪ್ರಕರಣ ನಡೆದಂದಿನಿಂದ ಆತ ತಲೆಮರೆಸಿಕೊಂಡಿದ್ದ.
ಮಂಗಳವಾರವಷ್ಟೇ ತೆಲಂಗಾಣ ಸಚಿವ ಮಲ್ಲಾ ರೆಡ್ಡಿ ಘಟನೆ ಕುರಿತು ಪ್ರತಿಕ್ರಿಯಿಸಿ “ನಾವು ಅತ್ಯಾಚಾರಿ ಹಾಗೂ ಕೊಲೆಗಡುಕನನ್ನು ಸೆರೆಹಿಡಿಯುತ್ತೇವೆ. ಆತನನ್ನು ಸೆರೆಹಿಡಿದ ನಂತರ ಎನ್ಕೌಂಟರ್ ನಡೆಯಲಿದೆ,'' ಎಂದು ಹೇಳಿದ್ದರು.
ಆರೋಪಿಯು ಸಂತ್ರಸ್ತೆಯ ನೆರೆಹೊರೆಯವನಾಗಿದ್ದ. ಆತನ ಫೋಟೋ ಬಿಡುಗಡೆಗೊಳಿಸಿದ್ದ ಪೊಲೀಸರು ಆತನ ಕುರಿತು ಸುಳಿವು ನೀಡಿದವರಿಗೆ ರೂ. 10 ಲಕ್ಷ ಬಹುಮಾನವನ್ನೂ ಘೋಷಿಸಿದ್ದರು.
ಬಾಲಕಿ ಹೈದರಾಬಾದ್ನ ಸಿಂಗರೇನಿ ಕಾಲನಿಯಲ್ಲಿನ ತನ್ನ ಮನೆಯಿಂದ ಸೆಪ್ಟೆಂಬರ್ 9ರಂದು ನಾಪತ್ತೆಯಾಗಿದ್ದಳು. ಮರುದಿನ ಆಕೆಯ ಮೃತದೇಹ ರಾಜುವಿನ ಮನೆಯಲ್ಲಿ ಬೆಡ್ಶೀಟ್ ಒಂದರಲ್ಲಿ ಸುತ್ತಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಹಾಗೂ ಆಕೆಯನ್ನು ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂದು ಪೋಸ್ಟ್ ಮಾರ್ಟಂ ವರದಿ ತಿಳಿಸಿತ್ತು.