ದಿಲ್ಲಿ: ಹೊಸ ರಕ್ಷಣಾ ಸಚಿವಾಲಯದ ಕಚೇರಿಗಳನ್ನುಉದ್ಘಾಟಿಸಿದ ಪ್ರಧಾನಿ ಮೋದಿ
ಸೆಂಟ್ರಲ್ ವಿಸ್ಟಾ ಯೋಜನೆಯನ್ನು ಟೀಕಿಸುವ ವಿಪಕ್ಷಗಳ ವಿರುದ್ಧ ವಾಗ್ದಾಳಿ
ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ಬೆಳಿಗ್ಗೆ ದಿಲ್ಲಿಯಲ್ಲಿ ಹೊಸ ರಕ್ಷಣಾ ಸಚಿವಾಲಯದ ಕಚೇರಿಗಳನ್ನು ಉದ್ಘಾಟಿಸಿದರು. ವಿವಾದಾತ್ಮಕ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ಟೀಕಿಸುತ್ತಿರುವ ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ಮಹತ್ವಾಕಾಂಕ್ಷೆಯ ರೂ. 20,000 ಕೋಟಿ ಯೋಜನೆಯನ್ನು ವಿಪಕ್ಷ ನಾಯಕರು. ಟೀಕಿಸಿದ್ದಾರೆ. ಈ ಯೋಜನೆಯಲ್ಲಿ ಹೊಸ ಸಂಸತ್ತು ,ಕೇಂದ್ರ ಸರ್ಕಾರಿ ಕಚೇರಿಗಳ ನಿರ್ಮಾಣ ಹಾಗೂ ಉತ್ತರ ಮತ್ತು ದಕ್ಷಿಣ ಬ್ಲಾಕ್ಗಳ ನವೀಕರಣ ಸೇರಿದೆ. ಪ್ರಮುಖ ಸರಕಾರಿ ಕಚೇರಿ ಹಾಗೂ ಸಚಿವಾಲಯಗಳ ಸ್ಥಿತಿಗಿಂತ 'ವೈಯಕ್ತಿಕ ಅಜೆಂಡಾ' ಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ ಎಂದರು.
"ಕೆಲವು ಜನರು ಹೇಗೆ ಪ್ರಮುಖವಾದ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ಹಾಳುಗೆಡವಲು ಪ್ರಯತ್ನಿಸಿದರು... ತಪ್ಪು ಮಾಹಿತಿಗಳನ್ನು ಹರಡಲು ಅವರು ಹೇಗೆ ವೈಯಕ್ತಿಕ ಕಾರ್ಯಸೂಚಿಗಳನ್ನು ನಡೆಸುತ್ತಿದ್ದರು ಎಂಬುದನ್ನು ನಾವು ನೋಡಿದ್ದೇವೆ. ಆದರೆ ಈ ಕಟ್ಟಡಗಳ ಸ್ಥಿತಿಯ ಬಗ್ಗೆ …ನಮ್ಮ ಸಚಿವಾಲಯಗಳು ಎಲ್ಲಿಂದ ಕೆಲಸ ಮಾಡುತ್ತವೆ ಎಂಬ ಕುರಿತಾಗಿ ಅವರು ಒಮ್ಮೆಯೂ ಮಾತನಾಡಲಿಲ್ಲ ... ಹೊಸ ರಕ್ಷಣಾ ಸಚಿವಾಲಯ ಸಂಕೀರ್ಣಗಳನ್ನು ಹಾಗೂ ಅವು ಎಷ್ಟು ನಿರ್ಣಾಯಕವಾಗಿವೆ ಎಂದು ಅವರು ಒಮ್ಮೆಯಾದರೂ ಉಲ್ಲೇಖಿಸಿದ್ದಾರೆಯೇ ಎಂದು ಪ್ರಧಾನಿ ಪ್ರಶ್ನಿಸಿದರು.
ಪ್ರಧಾನಿ ಮೋದಿ ಅವರು ರಾಹುಲ್ ಗಾಂಧಿಯಂತಹ ವಿರೋಧ ಪಕ್ಷದ ನಾಯಕರನ್ನು ಪರೋಕ್ಷವಾಗಿ ಟೀಕಿಸಿದರು.
ಸೆಂಟ್ರಲ್ ವಿಸ್ಟಾ ಯೋಜನೆಯು ಸಂಪನ್ಮೂಲಗಳ 'ಕ್ರಿಮಿನಲ್ ವ್ಯರ್ಥ' ಎಂದು ಮೇ ತಿಂಗಳಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಹೇಳಿದ್ದರು. ಅದೇ ಹಣವನ್ನು ಸಾಂಕ್ರಾಮಿಕ ರೋಗವನ್ನು ಎದುರಿಸಲು ಬಳಸುವಂತೆ ಸರಕಾರವನ್ನು ಒತ್ತಾಯಿಸಿದ್ದರು.
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಈ ಯೋಜನೆಯನ್ನು ಸ್ಥಗಿತಗೊಳಿಸುವಂತೆ, ವೈದ್ಯಕೀಯ ಮೂಲಸೌಕರ್ಯವನ್ನು ಉನ್ನತೀಕರಿಸಲು ಆದ್ಯತೆ ನೀಡುವಂತೆ ಸರಕಾರವನ್ನು ಒತ್ತಾಯಿಸಿದ್ದರು. ಸಾಂಕ್ರಾಮಿಕ ಹಾಗೂ ಲಾಕ್ಡೌನ್ ಹೊರತಾಗಿಯೂ ಸೆಂಟ್ರಲ್ ವಿಸ್ಟಾ ನಿರ್ಮಾಣವನ್ನು ಮುಂದುವರಿಸಲು ಅನುವು ಮಾಡಿಕೊಡಲು ಯೋಜನೆಯನ್ನು 'ಅಗತ್ಯ ಸೇವೆ' ಎಂದು ವರ್ಗೀಕರಿಸಿರುವುದಕ್ಕೆ ಕಾಂಗ್ರೆಸ್, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.