ಸ್ನೇಹಿತ ,ಕಾಲೇಜು ಸಹಪಾಠಿ ಹರ್ಷ ಮಂದರ್ ನಿವಾಸದ ಮೇಲೆ ಈಡಿ ದಾಳಿ ಆಘಾತ ತಂದಿದೆ: ಶಶಿ ತರೂರ್
ಹೊಸದಿಲ್ಲಿ: ಜಾರಿ ನಿರ್ದೇಶನಾಲಯ (ಈಡಿ) ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ರಾಷ್ಟ್ರ ರಾಜಧಾನಿಯಲ್ಲಿ ಮಾನವ ಹಕ್ಕುಗಳ ಹೋರಾಟಗಾರ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಹರ್ಷ ಮಂದರ್ ಅವರ ನಿವಾಸ ಹಾಗೂ ಕಚೇರಿಯನ್ನು ಶೋಧ ನಡೆಸಿದ ನಂತರ ಕಾಂಗ್ರೆಸ್ ಸಂಸದ ಶಶಿ ತರೂರ್ ಗುರುವಾರ ಆಘಾತ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟಿಸಿರುವ ತರೂರ್ "ನನ್ನ ಸ್ನೇಹಿತ ಹಾಗೂ ಕಾಲೇಜಿನ ಬ್ಯಾಚ್ಮೇಟ್ ಹರ್ಷ_ಮಂದರ್ ಮೇಲೆ ನಡೆದ ಈಡಿ ದಾಳಿಗಳನ್ನು ಓದಿ ನಾನು ಆಘಾತಕ್ಕೊಳಗಾಗಿದ್ದೇನೆ ಹಾಗೂ ನಿರಾಶೆಗೊಂಡಿದ್ದೇನೆ" ಎಂದು ಬರೆದಿದ್ದಾರೆ.
"ಹರ್ಷ ಮಂದರ್ ಅವರು ಪ್ರಶ್ನಾತೀತವಾದ ದಕ್ಷ ಹಾಗೂ ಪ್ರಾಮಾಣಿಕ ,ಇಂದಿನ ಭಾರತದ ಮಾನದಂಡಗಳಿಗೆ ಅನುಗುಣವಾಗಿ ನೇರ ನಡೆನುಡಿಯ ವ್ಯಕ್ತಿ. ಈ ದಾಳಿ ಒಂದು ಅಪಹಾಸ್ಯ" ಎಂದು ತರೂರ್ ಟ್ವೀಟ್ ಮಾಡಿದ್ದಾರೆ.
ದಕ್ಷಿಣ ದಿಲ್ಲಿಯ ವಸಂತ್ ಕುಂಜ್, ಅಡ್ಚಿನಿ ಹಾಗೂ ಮೆಹ್ರೌಲಿ ಪ್ರದೇಶಗಳಲ್ಲಿರುವ ಮಂದರ್ ನಿವಾಸ ಹಾಗೂ ಎನ್ ಜಿಓ ಕಚೇರಿಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್ಎ) ಅಡಿಯಲ್ಲಿ ಶೋಧಿಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿವೆ.