ಮಹಂತ್ ನರೇಂದ್ರ ಗಿರಿ ನಿಗೂಢ ಸಾವಿನ ಕುರಿತು ಸಿಬಿಐ ತನಿಖೆಗೆ ಶಿವಸೇನೆ ಒತ್ತಾಯ
ಹೊಸದಿಲ್ಲಿ: ಮಹಂತ್ ನರೇಂದ್ರ ಗಿರಿ ಸಾವಿನ ಕುರಿತು ಮಂಗಳವಾರ ಬಿಜೆಪಿಯನ್ನು ಗುರಿಯಾಗಿಸಿಕೊಂಡಿರುವ ಶಿವಸೇನೆ ನಾಯಕ ಸಂಜಯ್ ರಾವತ್ ಉತ್ತರ ಪ್ರದೇಶದಲ್ಲಿ "ಹಿಂದುತ್ವದ ಕತ್ತು ಹಿಸುಕಲಾಗಿದೆ" ಎಂದು ಹೇಳಿದರು ಹಾಗೂ ಪ್ರಮುಖ ಸಂತನ 'ನಿಗೂಢ ಸಾವಿನ' ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು..
ಉತ್ತರ ಪ್ರದೇಶದ ಅಲಹಾಬಾದ್ನ ಬಘಂಬರಿ ಮಠದಲ್ಲಿ ಸೋಮವಾರ ಹಿಂದೂಗಳ ಪ್ರಮುಖ ಸಂತ ನರೇಂದ್ರ ಗಿರಿ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ನರೇಂದ್ರ ಗಿರಿ ಅವರು ಭಾರತದ ಸಾಧು-ಸಂತರ ಅತಿದೊಡ್ಡ ಸಂಘಟನೆಯಾದ ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷರಾಗಿದ್ದರು.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾರಾವತ್ ಅವರು, "ನರೇಂದ್ರ ಗಿರಿ ಸಾವಿಗೆ ಆತ್ಮಹತ್ಯೆಯೇ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಅವರನ್ನು ಕೊಲೆ ಮಾಡಲಾಗಿದೆ ಎಂದು ಅವರ ಅನುಯಾಯಿಗಳು ಭಾವಿಸಿದ್ದಾರೆ'' ಎಂದರು.
"ಉತ್ತರ ಪ್ರದೇಶದಲ್ಲಿ ಯಾರೋ ಹಿಂದುತ್ವವನ್ನು ಕತ್ತು ಹಿಸುಕಿದ್ದಾರೆ. ಪಾಲ್ಘರ್ನಲ್ಲಿ ಸಂತರ ಸಾವಿಗೆ ಸಂಬಂಧಿಸಿ ನಾವು (ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರಕಾರ) ಮಾಡಿದ ರೀತಿಯಲ್ಲಿ ನರೇಂದ್ರ ಗಿರಿ ಸಾವಿನ ಬಗ್ಗೆಯೂ ಸಿಬಿಐ ತನಿಖೆ ನಡೆಯಬೇಕು’’ ಎಂದರು.