ಮಹಂತ ನರೇಂದ್ರ ಗಿರಿ ಸಾವು ಪ್ರಕರಣ:ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ, ತಪ್ಪಿತಸ್ಥರನ್ನು ದಂಡಿಸಲಾಗುವುದು:ಆದಿತ್ಯನಾಥ್
ಅಲಹಾಬಾದ್,ಸೆ.21: ಮಹಂತ ನರೇಂದ್ರ ಗಿರಿ ಅವರ ಸಾವಿನ ಕುರಿತು ಸಮಗ್ರ ತನಿಖೆಯನ್ನು ನಡೆಸಲಾಗುತ್ತಿದೆ ಮತ್ತು ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಿಳಿಸಿದ್ದಾರೆ.
ಸೋಮವಾರ ಅಲಹಾಬಾದಿನ ಬಾಘಂಬರಿ ಮಠದಲ್ಲಿ ಮಹಂತರ ಮೃತದೇಹ ಪತ್ತೆಯಾಗಿತ್ತು. ಅವರು ಭಾರತದಲ್ಲಿಯ ಸಾಧುಗಳ ಅತ್ಯಂತ ದೊಡ್ಡ ಸಂಘಟನೆಯಾಗಿರುವ ಅಖಿಲ ಭಾರತೀಯ ಅಖಾಡಾ ಪರಿಷದ್ನ ಅಧ್ಯಕ್ಷರಾಗಿದ್ದರು.
ಮಹಂತರಿಗೆ ಅಂತಿಮ ಗೌರವ ಸಲ್ಲಿಸಲು ಮಂಗಳವಾರ ಅಲಹಾಬಾದಿಗೆ ಭೇಟಿ ನೀಡಿದ್ದ ಆದಿತ್ಯನಾಥ್,ಎಡಿಜಿ ಮತ್ತು ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಸಾಕ್ಷಾಧಾರಗಳನ್ನು ಸಂಗ್ರಹಿಸಲಾಗಿದ್ದು,ಶೀಘ್ರವೇ ಪ್ರಕರಣವನ್ನು ಭೇದಿಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.
ಬುಧವಾರ ಐವರು ವೈದ್ಯರ ತಂಡವೊಂದು ಮರಣೋತ್ತರ ಪರೀಕ್ಷೆಯನ್ನು ನಡೆಸಲಿದ್ದು,ಬಳಿಕ ಧಾರ್ಮಿಕ ವಿಧಿಗಳಂತೆ ಸಮಾಧಿ ಮಾಡಲಾಗುವುದು ಎಂದರು.
ಪೊಲೀಸರು ತಿಳಿಸಿರುವಂತೆ ಸೋಮವಾರ ಶಿಷ್ಯರು ನೋಡಿದಾಗ ಮಹಂತ ನರೇಂದ್ರ ಗಿರಿಯವರ ಶವವು ಛಾವಣಿಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿತ್ತು. ಸ್ಥಳದಲ್ಲಿ ಏಳೆಂಟು ಪುಟಗಳ ಆತ್ಮಹತ್ಯಾ ಪತ್ರವೊಂದು ಪತ್ತೆಯಾಗಿದ್ದು,ತಾನು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದೇನೆ ಮತ್ತು ತನ್ನ ಜೀವನವನ್ನು ಅಂತ್ಯಗೊಳಿಸುವುದಾಗಿ ಮಹಂತ ಗಿರಿ ಅದರಲ್ಲಿ ಬರೆದಿದ್ದರು. ತನ್ನ ಓರ್ವ ಶಿಷ್ಯನಿಂದಾಗಿ ತಾನು ಕಳವಳಗೊಂಡಿದ್ದೇನೆ ಎಂದೂ ಅವರು ಪತ್ರದಲ್ಲಿ ಬರೆದಿದ್ದಾರೆ ಎಂದೂ ಪೊಲೀಸರು ತಿಳಿಸಿದರು.