ಅಧಿಕಾರಿ ವರ್ಗಗಳ ಕುರಿತು ತನ್ನ ವಿವಾದಾತ್ಮಕ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದ ಉಮಾಭಾರತಿ
"ನಾನು ನನ್ನ ಭಾಷೆಯನ್ನು ಸುಧಾರಿಸಿಕೊಳ್ಳುವೆ"
ಭೋಪಾಲ್: ಸರಕಾರಿ ಅಧಿಕಾರಿಗಳು ನಮ್ಮ (ನಾಯಕರ) ಚಪ್ಪಲಿಗಳನ್ನು ಎತ್ತಿಕೊಳ್ಳಲು ಮಾತ್ರ ಇದ್ದಾರೆ ಎಂಬ ವಿವಾದಾತ್ಮಕ ಹೇಳಿಕೆಗಳ ನಂತರ, ಹಿರಿಯ ಬಿಜೆಪಿ ನಾಯಕಿ ಉಮಾಭಾರತಿ ಅವರು ಕಾಂಗ್ರೆಸ್ ಹಿರಿಯ ದಿಗ್ವಿಜಯ ಸಿಂಗ್ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ನಾನು ನನ್ನ ಭಾಷೆಯನ್ನು ಸುಧಾರಿಸಿಕೊಳ್ಳುವೆ. ನೀವು ಕೂಡ ಹಾಗೆಯೇ ಮಾಡಿ ಎಂದು ಒತ್ತಾಯಿಸಿದ್ದಾರೆ.
ಅಧಿಕಾರಿ ವರ್ಗದ ವಿರುದ್ಧ ಉಮಾಭಾರತಿಯವರ ಟೀಕೆ-ಟಿಪ್ಪಣಿಗಳನ್ನು ಒಳಗೊಂಡ ವೀಡಿಯೊ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ದಿಗ್ವಿಜಯ್ ಸಿಂಗ್ ಅವರು ತನಗೆ ಕಡಿಮೆ ಮಾತನಾಡಲು ಹೇಳಿದ್ದಕ್ಕಾಗಿ ಉಮಾಭಾರತಿಯನ್ನು ಟೀಕಿಸಿದ್ದರು. ಆದರೆ ಆಕೆಯೇ ಅಧಿಕಾರಶಾಹಿಗಳ ವಿರುದ್ಧ 'ಅತ್ಯಂತ ಆಕ್ಷೇಪಾರ್ಹ' ಪದಗಳನ್ನು ಬಳಸಿದ್ದಾರೆ ಎಂದಿದ್ದರು.
ಅಧಿಕಾರಿಗಳ ಬಗ್ಗೆ ಹೇಳಿಕೆಗೆ ಕ್ಷಮೆಯಾಚಿಸುವಂತೆಯೂ ದಿಗ್ವಿಜಯ್ ಸಿಂಗ್ ಆಗ್ರಹಿಸಿದ್ದರು.
ಮಂಗಳವಾರ ದಿಗ್ವಿಜಯ ಸಿಂಗ್ ಅವರಿಗೆ ಉಮಾಭಾರತಿ ಬರೆದ ಸಂಕ್ಷಿಪ್ತ ಪತ್ರದಲ್ಲಿ, "ನನ್ನ ಸ್ವಂತ ಮಾತುಗಳಿಂದ ನನಗೆ ತುಂಬಾ ನೋವಾಗಿದೆ. ಇನ್ನು ಮುಂದೆ ನಾನು ನನ್ನ ಭಾಷೆಯನ್ನು ಸುಧಾರಿಸಿಕೊಳ್ಳುವೆ. ನೀವು ಕೂಡ ಹಾಗೆಯೇ ಮಾಡಿ'' ಎಂದು ಬರೆದಿದ್ದರು.