ಸಚಿವ ಸಂಪುಟದ 15 ಸಚಿವರು ನಾಳೆ ಪ್ರಮಾಣವಚನ: ಪಂಜಾಬ್ ಸಿಎಂ ಚನ್ನಿ
ಅಮರಿಂದರ್ ಸಿಂಗ್ ಕ್ಯಾಬಿನೆಟ್ ನಲ್ಲಿದ್ದ ಐವರನ್ನು ಕೈಬಿಟ್ಟ ಕಾಂಗ್ರೆಸ್, 7 ಶಾಸಕರಿಗೆ ಅವಕಾಶ
ಚಂಡಿಗಡ: ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ತನ್ನ ಸಂಪುಟದಲ್ಲಿ ಮಂತ್ರಿಗಳ ಪಟ್ಟಿ ಅಂತಿಮಗೊಂಡ ನಂತರ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ಭೇಟಿಯಾದರು. ತಮ್ಮ ಸಚಿವ ಸಂಪುಟದ 15 ಸಚಿವರು ರವಿವಾರ ಸಂಜೆ 4: 30 ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಹೇಳಿದ್ದಾಗಿ Indian express ವರದಿ ಮಾಡಿದೆ.
ಏಳು ಶಾಸಕರನ್ನು ಸೇರಿಸಿಕೊಳ್ಳುವಲ್ಲಿ ಹಾಗೂ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಸಂಪುಟದಲ್ಲಿದ್ದ ಐವರನ್ನು ಕೈಬಿಡುವಲ್ಲಿ ಪಕ್ಷವು ಒಮ್ಮತವನ್ನು ಸಾಧಿಸಲು ಸಾಧ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ಕೆ.ಸಿ. ವೇಣುಗೋಪಾಲ್, ಹರೀಶ್ ರಾವತ್, ಹರೀಶ್ ಚೌಧರಿ ಮತ್ತು ಅಜಯ್ ಮಾಕೆನ್ ಸಹ ಹಾಜರಿದ್ದರು. ಪಕ್ಷವು ಮಾಜಿ ಆರೋಗ್ಯ ಸಚಿವ ಬಲಬೀರ್ ಸಿಧು, ಕಂದಾಯ ಸಚಿವ ಗುರುಪ್ರೀತ್ ಸಿಂಗ್ ಕಾಂಗಾರ್, ಕೈಗಾರಿಕಾ ಸಚಿವ ಸುಂದರ್ ಶಾಮ್ ಅರೋರಾ, ಸಮಾಜ ಕಲ್ಯಾಣ ಸಚಿವ ಸಾಧು ಸಿಂಗ್ ಧರ್ಮಸೋಟ್ ಹಾಗೂ ಕ್ರೀಡಾ ಸಚಿವ ರಾಣಾ ಗುರ್ಮಿತ್ ಸಿಂಗ್ ಸೋಧಿ. ಅವರನ್ನು ಕೈಬಿಡಲು ನಿರ್ಧಿರಿಸಿದೆ.
ನಿನ್ನೆ ರಾತ್ರಿ ಅಂತಿಮಗೊಳಿಸಿದ ಇತರರಲ್ಲಿ ಪಿಪಿಸಿಸಿ ಪ್ರಧಾನ ಕಾರ್ಯದರ್ಶಿ ಪರ್ಗತ್ ಸಿಂಗ್, ಪಿಪಿಸಿಸಿ ಕಾರ್ಯಾಧ್ಯಕ್ಷ, ಕುಲ್ಜಿತ್ ನಾಗ್ರಾ ಹಾಗೂ ಗಿಡ್ಡೇರ್ಬಾಹಾ ಶಾಸಕ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರಿದ್ದಾರೆ. ಇವರೆಲ್ಲರೂ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರ ಆಯ್ಕೆಗಳು.