ಅಸ್ಸಾಂ ಹಿಂಸಾಚಾರ;ನ್ಯಾಯಾಲಯ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕು: ಕಪಿಲ್ ಸಿಬಲ್
ಹೊಸದಿಲ್ಲಿ: ಅಸ್ಸಾಂನಲ್ಲಿ ನಡೆದಿರುವ ಹಿಂಸಾಚಾರದ ಕುರಿತು ನ್ಯಾಯಾಲಯಗಳು ಸ್ವಯಂ ಪ್ರೇರಿತವಾಗಿ ಪ್ರಕರಣಗಳನ್ನು ದಾಖಲಿಸಿ ವಿಚಾರಣೆ ನಡೆಸಬೇಕು ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಒತ್ತಾಯಿಸಿದ್ದಾರೆ.
ಅಸ್ಸಾಂ ಹಿಂಸಾಕೃತ್ಯದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿ ನಲುಗಿಹೋಗಿದ್ದೇನೆ. ಪ್ರತಿರೋಧ ತೋರಿದವರ ಮೇಲೆ ನಡೆದಿರುವ ಅಮಾನುಷ ದೌರ್ಜನ್ಯವು ನಮ್ಮನ್ನು ವಿಚಲಿತರನ್ನಾಗಿಸಿದೆ. ಈ ಕುರಿತು ಸರಕಾರ ಮೌನವಾಗಿರುವುದನ್ನು ನೋಡಿ ಹರಾಶೆಯಾಗಿದೆ ಎಂದು ಸಿಬಲ್ ಹೇಳಿದರು.
ದರಂಗ್ ಜಿಲ್ಲೆಯಲ್ಲಿ ಅಸ್ಸಾಂ ಸರಕಾರವು ಒತ್ತುವರಿ ಜಮೀನು ತೆರವು ಕಾರ್ಯಾಚರಣೆ ಕೈಗೊಂಡಿತ್ತು. ಭೂಮಿ ಕಬಳಿಸಿದ್ದಾರೆ ಎನ್ನಲಾದ ಸ್ಥಳೀಯರು ಹಾಗೂ ಪೊಲೀಸರ ನಡುವೆ ಸಂಘರ್ಷ ನಡೆದು ಅದು ಹಿಂಸಾತ್ಮಕ ರೂಪ ಪಡೆದಿತ್ತು. ಪೊಲೀಸರು ನಡೆಸಿದ್ದ ಗುಂಡಿನ ದಾಳಿಗೆ ಇಬ್ಬರು ಸ್ಥಳೀಯರು ಮೃತಪಟ್ಟಿದ್ದರು. ಘಟನೆಯಲ್ಲಿ 20ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಇದೇ ವೇಳೆ ಎದೆಗೆ ಗುಂಡೇಟು ಬಿದ್ದಿದ್ದ ವ್ಯಕ್ತಿಯ ಮೇಲೆ ಛಾಯಾಗ್ರಾಹಕನೊಬ್ಬ ಹಾರಿ, ನೆಗೆದು ಹಲ್ಲೆ ನಡೆಸುತ್ತಿರುವ ವೀಡಿಯೊ ಸಾಮಾಜಿಕ ತಾಣಗಳಲ್ಲಿ ಭಾರೀ ವಿರೋಧಕ್ಕೆ ಕಾರಣವಾಗಿತ್ತು.