ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಸಂಪುಟ ವಿಸ್ತರಿಸಲು ಮುಂದಾದ ಆದಿತ್ಯನಾಥ್
ಲಕ್ನೋ: ಉತ್ತರ ಪ್ರದೇಶ ಮಂತ್ರಿಮಂಡಲದ ನಿರ್ಣಾಯಕ ವಿಸ್ತರಣೆ ಸನ್ನಿಹಿತವಾಗಿದೆ ಎಂದು ಮೂಲಗಳು ಎನ್ ಡಿ ಟಿವಿಗೆ ತಿಳಿಸಿದ್ದು, ರವಿವಾರ ಸಂಜೆ ಆರರಿಂದ ಏಳು ಹೊಸ ಮುಖಗಳನ್ನು ಮುಖ್ಯಮಂತ್ರಿ ಆದಿತ್ಯನಾಥ್ ತನ್ನ ತಂಡಕ್ಕೆ ಸೇರಿಸಿಕೊಳ್ಳುವ ನಿರೀಕ್ಷೆಯಿದೆ.
ರಾಜಕೀಯವಾಗಿ ಪ್ರಮುಖವಾಗಿರುವ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ತಿಂಗಳುಗಳ ಮುನ್ನ ಈ ವಿಸ್ತರಣೆಯು ನಡೆಯುತ್ತಿದೆ. ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜಾತಿಗಳು ಹಾಗೂ ಸಮುದಾಯಗಳ ಪ್ರತಿನಿಧಿಯನ್ನು ಸಂಪುಟ ಒಳಗೊಂಡಿರುತ್ತದೆ ಎನ್ನಲಾಗಿದೆ.
ನಿರೀಕ್ಷಿತ ಹೊಸ ಮುಖಗಳಲ್ಲಿ ಕಾಂಗ್ರೆಸ್ನ ಮಾಜಿ ನಾಯಕ ಜಿತಿನ್ ಪ್ರಸಾದ ಒಬ್ಬರಾಗಿದ್ದಾರೆ. ಪ್ರಸಾದ್ ಅವರು ಈ ಹಿಂದೆ ರಾಹುಲ್ ಗಾಂಧಿಯ ಆಪ್ತರಾಗಿದ್ದರು . ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ನ ಪ್ರಮುಖ ಬ್ರಾಹ್ಮಣ ನಾಯಕರಾಗಿದ್ದ ಪ್ರಸಾದ್ ಜೂನ್ ನಲ್ಲಿ ಪಕ್ಷ ಬದಲಾಯಿಸಿದ್ದರು.
ಬಿಜೆಪಿಯ ಮಿತ್ರ ಪಕ್ಷವಾದ ಸಂಜಯ್ ನಿಶಾದ್ ನೇತೃತ್ವದ ನಿಶಾದ್ ಪಕ್ಷದ ಶಾಸಕ ಕೂಡ ಸಂಪುಟ ಸೇರಿಕೊಳ್ಳುವ ನಿರೀಕ್ಷೆಯಿದೆ. ನಿಶಾದ್ ತನ್ನ ಮಗ ಹಾಗೂ ಸಂಸದ ಪ್ರವೀಣ್ ನಿಶಾದ್ ಅವರನ್ನು ಕೇಂದ್ರ ಸಚಿವ ಸಂಪುಟದ ಬೃಹತ್ ಪುನರ್ ರಚನೆಯಲ್ಲಿ ಸೇರಿಸಲಾಗಿಲ್ಲ ಎಂದು ಈ ಹಿಂದೆ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.