ಕಾಂಗ್ರೆಸ್ ನಲ್ಲಿ ಈಗ ಚುನಾಯಿತ ಅಧ್ಯಕ್ಷರಿಲ್ಲ, ಯಾರು ನಿರ್ಧಾರ ಕೈಗೊಳ್ಳುತ್ತಿದ್ದಾರೆಂದು ಗೊತ್ತಿಲ್ಲ: ಕಪಿಲ್ ಸಿಬಲ್
ಹೊಸದಿಲ್ಲಿ: ಪಂಜಾಬ್ನಂತಹ ರಾಜ್ಯಗಳಲ್ಲಿ ಕಾಂಗ್ರೆಸ್ ಬಿಕ್ಕಟ್ಟುಗಳೊಂದಿಗೆ ಹೋರಾಡುತ್ತಿರುವಾಗ ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ನಾಯಕತ್ವಕ್ಕೆ ಸಂಬಂಧಿಸಿ ಹೊಸ ಅಹಿತಕರ ಪ್ರಶ್ನೆಗಳನ್ನು ಎತ್ತಿದ್ದಾರೆ. 'ಕಾಂಗ್ರೆಸ್ ನಲ್ಲಿ ಈಗ ಚುನಾಯಿತ ಅಧ್ಯಕ್ಷರಿಲ್ಲ. ಯಾರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆಂದು ನಮಗೆ ಗೊತ್ತಿಲ್ಲ' ಎಂದು ಅವರು ಹೇಳಿದ್ದಾರೆ.
"ನಾವು ಜಿ -23, ಖಂಡಿತವಾಗಿಯೂ ಜಿ ಹುಜೂರ್ -23 ಅಲ್ಲ. ನಾವು ಸಮಸ್ಯೆಗಳನ್ನು ಎತ್ತುತ್ತಲೇ ಇರುತ್ತೇವೆ" ಎಂದು ಸಿಬಲ್ ಹೇಳಿದರು.
ಪಕ್ಷದಲ್ಲಿ ವ್ಯಾಪಕ ಬದಲಾವಣೆಗಳು ಹಾಗೂ "ದೂರದೃಷ್ಟಿಯುಳ್ಳ ನಾಯಕತ್ವ"ದ ಬೇಡಿಕೆ ಇಟ್ಟು ಕಳೆದ ವರ್ಷ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ 23 ನಾಯಕರ ಗುಂಪಿನಲ್ಲಿ ಸಿಬಲ್ ಕೂಡ ಒಬ್ಬರಾಗಿದ್ದರು.
"ನಾಯಕರು ಯಾಕೆ ಪಕ್ಷ ಬಿಟ್ಟು ಹೋಗುತ್ತಿದ್ದಾರೆ? ಬಹುಶಃ ಅದು ನಮ್ಮ ತಪ್ಪೇ ಎಂದು ನಾವು ನೋಡಬೇಕು? ನಾವು ತಕ್ಷಣ ಕಾಂಗ್ರೆಸ್ ಕಾರ್ಯಕಾರಿ ಸಭೆ ಕರೆಯಬೇಕು. ಕನಿಷ್ಠ ಒಂದು ಸಂವಾದ ನಡೆಯಬಹುದು. ನಾವು ಪಕ್ಷದ ಸಿದ್ಧಾಂತವನ್ನು ಬಿಟ್ಟು ಬೇರೆಲ್ಲಿಗೂ ಹೋಗುವುದಿಲ್ಲ. ವಿಪರ್ಯಾಸವೆಂದರೆ ಕಾಂಗ್ರೆಸ್ ನಾಯಕತ್ವಕ್ಕೆ ಹತ್ತಿರ ಇರುವವರು ಪಕ್ಷ ತೊರೆದಿದ್ದಾರೆ ಹಾಗೂ ಅವರಿಗೆ ಹತ್ತಿರವಾಗಿಲ್ಲ ಎಂದು ಭಾವಿಸುವವರು ಇನ್ನೂ ಇದ್ದಾರೆ’' ಎಂದು ಸಿಬಲ್ ಹೇಳಿದರು.