'ಶೀಘ್ರದಲ್ಲೇ' ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ: ರಣದೀಪ್ ಸುರ್ಜೆವಾಲಾ
ಜಿ-23 ನಾಯಕರ ಬೇಡಿಕೆಗೆ ಮಣಿದ ಹೈಕಮಾಂಡ್
ಹೊಸದಿಲ್ಲಿ: ಈಗ ನಡೆಯುತ್ತಿರುವ ಪಂಜಾಬ್ ಬಿಕ್ಕಟ್ಟು ಹಾಗೂ ಪ್ರಮುಖ ನಾಯಕರ ನಿರ್ಗಮನದ ಹಿನ್ನೆಲೆಯಲ್ಲಿ ಕೆಲವು ಹಿರಿಯ ನಾಯಕರು ಸಿಡಬ್ಲ್ಯೂಸಿ ಸಭೆಗೆ ಒತ್ತಾಯಿಸಿದ ಒಂದು ದಿನದ ನಂತರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು (ಸಿಡಬ್ಲ್ಯೂಸಿ) 'ಶೀಘ್ರದಲ್ಲೇ' ಭೇಟಿಯಾಗಲಿದೆ ಎಂದು ಪಕ್ಷ ಗುರುವಾರ ಹೇಳಿದೆ.
ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ, ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಿಡಬ್ಲ್ಯುಸಿ ಸಭೆ ಕರೆಯಲು ಕಳೆದ ವಾರವೇ ಸೂಚಿಸಿದ್ದರು ಎಂದರು.
ಬುಧವಾರ ಜಿ -23 ಸದಸ್ಯರಾದ ಕಪಿಲ್ ಸಿಬಲ್ ಹಾಗೂ ಗುಲಾಂ ನಬಿ ಆಝಾದ್ ಅವರು ಪಕ್ಷದಿಂದ ಪಕ್ಷಾಂತರ ಹಾಗೂ ಪಂಜಾಬ್ ಸೇರಿದಂತೆ ಹಲವು ರಾಜ್ಯ ಘಟಕಗಳಲ್ಲಿ ಗೊಂದಲಗಳ ನಡುವೆಯೂ ಪಕ್ಷವು ನಡೆಯುತ್ತಿರುವ ದಿಕ್ಕಿನ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಆಂತರಿಕ ಬಿಕ್ಕಟ್ಟಿನ ಕುರಿತು ಚರ್ಚಿಸಲು ತಕ್ಷಣವೇ ಸಿಡಬ್ಲ್ಯೂಸಿ ಸಭೆಯನ್ನು ಕರೆಯಬೇಕೆಂದು ಅವರು ಒತ್ತಾಯಿಸಿದ್ದರು.
ಆಝಾಧ್ ಅವರು ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ, ಸಿಡಬ್ಲ್ಯೂಸಿ ಸಭೆಗೆ ಒತ್ತಾಯಿಸಿದರು. ಪಕ್ಷವು ಸಲಹೆಗಳನ್ನು ಸ್ವಾಗತಿಸಬೇಕು ಹಾಗೂ ಅವುಗಳನ್ನು ನಿಗ್ರಹಿಸಬಾರದು ಎಂದು ಅವರು ಹೇಳಿದರು.
" ಬಿಕ್ಕಟ್ಟಿನ ಸಮಯದಲ್ಲಿ ಪ್ರತಿಯೊಬ್ಬ ಕಾಂಗ್ರೆಸ್ಸಿಗರು ತಮ್ಮ ಮಾತುಗಳು ಹಾಗೂ ಕಾರ್ಯಗಳಿಂದ ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆಯೇ ಎಂದು ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು’’ ಎಂದು ಸೋನಿಯಾ ಗಾಂಧಿ ಅವರಿಗೆ ಪಕ್ಷದ ಸ್ವರೂಪದಲ್ಲಿ ಮಹತ್ತರವಾದ ಬದಲಾವಣೆಗಳನ್ನು ಕೋರಿ ಪತ್ರ ಬರೆದ 23 ಸದಸ್ಯರ ಗುಂಪಿನಲ್ಲಿದ್ದವರನ್ನು ಉಲ್ಲೇಖಿಸಿ ಸುರ್ಜೆವಾಲಾ ಹೇಳಿದ್ದಾರೆ.