ಕಾನೂನಿನ ಪ್ರಕಾರ ರಾಹುಲ್ ಗಾಂಧಿಗೆ ಲಖಿಂಪುರ ಖೇರಿಗೆ ಭೇಟಿ ನೀಡಲು ಅನುಮತಿ ನಿರಾಕರಣೆ: ಉತ್ತರಪ್ರದೇಶ ಸರಕಾರ
ಲಕ್ನೊ: ಲಖಿಂಪುರ ಖೇರಿ ಜಿಲ್ಲೆಯಲ್ಲಿ ನಡೆದಿರುವ 'ಸೂಕ್ಷ್ಮ' ಘಟನೆಯಲ್ಲಿ ಪ್ರತಿಪಕ್ಷಗಳು 'ಋಣಾತ್ಮಕ' ಧೋರಣೆಯನ್ನು ಅಳವಡಿಸಿಕೊಂಡಿದೆ ಹಾಗೂ ವಾತಾವರಣವನ್ನು ಹಾಳುಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಲಖಿಂಪುರ ಭೇಟಿಗೆ ಅವಕಾಶ ನಿರಾಕರಸಿರುವ ತನ್ನ ನಿರ್ಧಾರವನ್ನು ಉತ್ತರ ಪ್ರದೇಶ ಸರಕಾರ ಬುಧವಾರ ಸಮರ್ಥಿಸಿಕೊಂಡಿದೆ.
ಸರಕಾರದ ವಕ್ತಾರ ಹಾಗೂ ಸಂಪುಟ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಅವರು ವಿರೋಧ ಪಕ್ಷಗಳು ಫೋಟೋವನ್ನು ತೆಗೆಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಅದನ್ನು ಹಾಕುವ ಉದ್ದೇಶದಿಂದ ಲಖಿಂಪುರ್ ಖೇರಿಗೆ ಭೇಟಿ ನೀಡಲು ಬಯಸಿವೆ ಹಾಗೂ 'ಈಗ ಯುವರಾಜ್' (ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಉಲ್ಲೇಖಿಸಿ) ಆ ಪ್ರದೇಶದಲ್ಲಿ ಪ್ರವಾಸ ಮಾಡಲು ನಿರ್ಧರಿಸಿದ್ದಾರೆ. ಯಾರನ್ನೂ ವಾತಾವರಣ ಹಾಳುಗೆಡಹಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
" ಅನುಮತಿಯನ್ನು ನಿರಾಕರಿಸುವ ಮೂಲಕ ಸರಕಾರವು ಕಾನೂನಿನ ಪ್ರಕಾರ ನಿರ್ಧಾರ ತೆಗೆದುಕೊಂಡಿದೆ ಹಾಗೂ ಅವರನ್ನು (ರಾಹುಲ್ ಗಾಂಧಿ) ಬರಬಾರದೆಂದು ವಿನಂತಿಸಿದೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
"ಲಖಿಂಪುರ್ ಪ್ರಕರಣದಲ್ಲಿ, ಕಾನೂನು ತನ್ನದೇ ಆದ ಮಾರ್ಗವನ್ನು ತೆಗೆದುಕೊಳ್ಳುತ್ತದೆ ಮತ್ತು ತಪ್ಪಿತಸ್ಥರನ್ನು ಹಿಡಿಯಲಾಗುತ್ತದೆ" ಎಂದು ಅವರು ಹೇಳಿದರು.