ಲಖಿಂಪುರ ಖೇರಿ ಹಿಂಸಾಚಾರ:ಅಕ್ಟೋಬರ್ 11 ರ ಮಹಾರಾಷ್ಟ್ರ ಬಂದ್ ಕರೆಗೆ ಶಿವಸೇನೆ ಬೆಂಬಲ
ಮುಂಬೈ: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ರೈತರ ಹತ್ಯೆಯನ್ನು ವಿರೋಧಿಸಿ ಅಕ್ಟೋಬರ್ 11 ರಂದು ಮಹಾರಾಷ್ಟ್ರದಲ್ಲಿ ನಡೆಯಲಿರುವ ಬಂದ್ ಗೆ ಶಿವಸೇನೆ ಸಂಪೂರ್ಣ ಬಲದಿಂದ ಭಾಗವಹಿಸಲಿದೆ ಎಂದು ಪಕ್ಷದ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಎನ್ಸಿಪಿ ವಕ್ತಾರ ನವಾಬ್ ಮಲಿಕ್ ಹಾಗೂ ರಾಜ್ಯ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಅವರೊಂದಿಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾವತ್, ಕೇಂದ್ರ ಸರಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಜನರನ್ನು ಎಚ್ಚರಿಸುವುದು ಅಗತ್ಯ ಎಂದು ಹೇಳಿದರು.
ಈ ಹೋರಾಟದಲ್ಲಿ ರೈತರು ಒಬ್ಬಂಟಿಯಾಗಿಲ್ಲ ಹಾಗೂ ಅವರೊಂದಿಗೆ ಒಗ್ಗಟ್ಟು ಪ್ರದರ್ಶಿಸುವ ಪ್ರಕ್ರಿಯೆಯು ಮಹಾರಾಷ್ಟ್ರದಿಂದಲೇ ಆರಂಭವಾಗಬೇಕು ಎಂದು ರಾವತ್ ಪ್ರತಿಪಾದಿಸಿದರು.
ಎನ್ ಸಿಪಿಯ ಶರದ್ ಪವಾರ್ ಹಾಗೂ ಕಾಂಗ್ರೆಸ್ ನ ರಾಹುಲ್ ಗಾಂಧಿಯವರೊಂದಿಗೆ ಜಂಟಿ ವಿರೋಧದ ಕಾರ್ಯತಂತ್ರದ ಅಗತ್ಯವನ್ನು ಚರ್ಚಿಸಿದ್ದೇನೆ ಎಂದ ಅವರು, ಇತರ ರಾಜ್ಯಗಳು ರೈತರೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಲು ಮಹಾರಾಷ್ಟ್ರದ ಮಾರ್ಗವನ್ನು ಅನುಸರಿಸಬೇಕು ಎಂದು ಹೇಳಿದರು.