ಜಮ್ಮು:ಇಬ್ಬರು ಪ್ರಮುಖ ನಾಯಕರು ರಾಜೀನಾಮೆ,ನ್ಯಾಶನಲ್ ಕಾನ್ಫರೆನ್ಸ್ ಪಕ್ಷಕ್ಕೆ ಹಿನ್ನಡೆ
ದೇವೇಂದರ್ ರಾಣಾ,photo: Twitter: @DevenderSRana
ಜಮ್ಮು:ಜಮ್ಮುವಿನಲ್ಲಿ ನ್ಯಾಶನಲ್ ಕಾನ್ಫರೆನ್ಸ್ ಪಕ್ಷವು ಹಿನ್ನಡೆ ಅನುಭವಿಸಿದ್ದು, ಇಬ್ಬರು ಪ್ರಮುಖ ನಾಯಕರಾದ ದೇವೇಂದರ್ ರಾಣಾ ಹಾಗೂ ಸುರ್ಜಿತ್ ಸಿಂಗ್ ಸ್ಲಾಥಿಯಾ ರವಿವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಇಬ್ಬರು ಸೋಮವಾರ ದಿಲ್ಲಿಯಲ್ಲಿ ಬಿಜೆಪಿ ಸೇರುವ ಸಾಧ್ಯತೆ ಇದೆ.
ಡಾ. ಫಾರೂಕ್ ಅಬ್ದುಲ್ಲಾ ಅವರು ಸ್ಲಾಥಿಯಾ ಹಾಗೂ ರಾಣಾ ಅವರ ರಾಜೀನಾಮೆಗಳನ್ನು ಸ್ವೀಕರಿಸಿದ್ದಾರೆ ಹಾಗೂ ಅಂಗೀಕರಿಸಿದ್ದಾರೆ. ಯಾವುದೇ ಮುಂದಿನ ಕ್ರಮ ಅಥವಾ ಹೇಳಿಕೆಯ ಅಗತ್ಯವಿಲ್ಲ ಎಂದು ನ್ಯಾಶನಲ್ ಕಾನ್ಫರೆನ್ಸ್ ವಕ್ತಾರರು ಟ್ವೀಟ್ ಮಾಡಿದ್ದಾರೆ.
ಜಮ್ಮು ಪ್ರದೇಶದ ನ್ಯಾಶನಲ್ ಕಾನ್ಫರೆನ್ಸ್ ಪ್ರಾಂತೀಯ ಅಧ್ಯಕ್ಷರಾಗಿದ್ದ ರಾಣಾ, ತಮ್ಮ ಪಕ್ಷವನ್ನು ತೊರೆದು ಬಿಜೆಪಿಗೆ ಸೇರುವ ಬಗ್ಗೆ ಒಂದು ವಾರದಿಂದ ಇದ್ದ ಊಹಾಪೋಹಗಳಿಗೆ ತೆರೆ ಎಳೆದರು. ಜಮ್ಮುವಿನಲ್ಲಿ ತಮ್ಮ ಮನೆಯ ಹೊರಗೆ ಮಾಧ್ಯಮದವರೊಂದಿಗೆ ಸಂವಾದದ ಸಮಯದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಅನ್ನು ತೊರೆಯುವ ನಿರ್ಧಾರವನ್ನು ಪ್ರಕಟಿಸಿದರು.
"ನಾನು ,ಎಸ್ಎಸ್ ಸ್ಲಾಥಿಯಾ (ಪಕ್ಷದ ಹಿರಿಯ ಸಹೋದ್ಯೋಗಿ ಮತ್ತು ಮಾಜಿ ಸಚಿವ) ಅವರೊಂದಿಗೆ ನ್ಯಾಶನಲ್ ಕಾನ್ಫರೆನ್ಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.