ಪಿಎಂ ಕೇರ್ಸ್ ಫಂಡ್ :ಪ್ರಧಾನಿ ಫೋಟೊ ತೆಗೆದುಹಾಕಲು ಕೋರಿದ ಅರ್ಜಿಗೆ ಉತ್ತರಿಸಲು ಕೇಂದ್ರಕ್ಕೆ ಬಾಂಬೆ ಹೈಕೋರ್ಟ್ ಆದೇಶ
ಹೊಸದಿಲ್ಲಿ: ಪಿಎಂ ಕೇರ್ಸ್ ಫಂಡ್ ನಲ್ಲಿ ಪ್ರಧಾನಮಂತ್ರಿ ಹೆಸರನ್ನು ಉಲ್ಲೇಖಿಸುವುದನ್ನು ಹಾಗೂ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ತೆಗೆದುಹಾಕುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿಗೆ ಉತ್ತರಿಸುವಂತೆ ಬಾಂಬೆ ಹೈಕೋರ್ಟ್ ಮಂಗಳವಾರ ಕೇಂದ್ರ ಸರಕಾರಕ್ಕೆ ಆದೇಶಿಸಿದೆ ಎಂದು Bar and Bench ವರದಿ ಮಾಡಿದೆ.
ಪಿಎಂ ಕೇರ್ಸ್ ಫಂಡ್ ತನ್ನ ಲೋಗೊದಲ್ಲಿ ರಾಷ್ಟ್ರೀಯ ಲಾಂಛನವನ್ನು ಬಳಸುತ್ತಿರುವ ಕುರಿತು ಅರ್ಜಿದಾರ-ಕಾಂಗ್ರೆಸ್ ಸದಸ್ಯ ವಿಕ್ರಾಂತ್ ಚವಾಣ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಲಾಂಛನ ಬಳಕೆಯು ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ವಾದಿಸಿದರು.
ಜಸ್ಟಿಸ್ ಎ.ಎ. ಸಯ್ಯದ್ ಹಾಗೂ ಎಸ್. ಜಿ. ದಿಗೆ ಅವರನ್ನೊಳಗೊಂಡ ವಿಭಾಗೀಯ ಪೀಠವು ಅರ್ಜಿಗೆ ಉತ್ತರಿಸುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರಿಗೆ ನಿರ್ದೇಶಿಸಿದರು. ನ್ಯಾಯಾಲಯವು ಅಕ್ಟೋಬರ್ 25ರಂದು ಮುಂದಿನ ವಿಚಾರಣೆ ಮುಂದೂಡಿತು ಎಂದು ಪಿಟಿಐ ವರದಿ ಮಾಡಿದೆ.
ಕೊರೋನ ವೈರಸ್ ಸಾಂಕ್ರಾಮಿಕದಂತಹ ತುರ್ತು ಹಾಗೂ ವಿಪತ್ತಿನ ಪರಿಸ್ಥಿತಿಯನ್ನು ನಿಭಾಯಿಸಲು ಸಮರ್ಪಿತ ರಾಷ್ಟ್ರೀಯ ನಿಧಿಯ ಉದ್ದೇಶದಲ್ಲಿ ಕಳೆದ ವರ್ಷ ಪಿಎಂ-ಕೇರ್ಸ್ ಫಂಡ್ ಸ್ಥಾಪಿಸಲಾಗಿತ್ತು.