ಕಾನ್ಪುರದ ಉದ್ಯಮಿಯ ಸಾವು ಪ್ರಕರಣ:ಆರು ಪೊಲೀಸರ ಬಂಧನ
photo: twitter
ಲಕ್ನೋ: ಕಾನ್ಪುರದ ಉದ್ಯಮಿ ಮನೀಶ್ ಗುಪ್ತಾ ಸಾವಿನ ಪ್ರಕರಣದಲ್ಲಿ ಆರೋಪಿಗಳಾಗಿರುವ ಎಲ್ಲಾ ಆರು ಪೊಲೀಸರನ್ನು ಬಂಧಿಸಲಾಗಿದೆ ಎಂದು ಉತ್ತರಪ್ರದೇಶ ಪೊಲೀಸರು ಶನಿವಾರ ತಿಳಿಸಿದ್ದಾರೆ.
ಉದ್ಯಮಿ ಸಾವು ಒಂದು ದೊಡ್ಡ ರಾಜಕೀಯ ವಿವಾದವಾಗಿ ಬದಲಾಗಿತ್ತು. ಯೋಗಿ ಆದಿತ್ಯನಾಥ್ ಸರಕಾರ ನಿಷ್ಕ್ರಿಯವಾಗಿದೆ ಎಂದು ಅನೇಕರು ಆರೋಪಿಸಿದ್ದರು.
ಕಳೆದ ತಿಂಗಳು ಗೋರಖ್ಪುರ್ ಹೋಟೆಲ್ನಲ್ಲಿ ತಮ್ಮ ಸ್ನೇಹಿತರನ್ನು ಭೇಟಿಯಾಗಿದ್ದಾಗ 36 ವರ್ಷದ ಗುಪ್ತಾ ಅವರು ತಡರಾತ್ರಿ ಪೊಲೀಸರ ದಾಳಿಯ ನಂತರ ಸಾವನ್ನಪ್ಪಿದರು. ಹಿರಿಯ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಆರೇಳು ಪೊಲೀಸರು ಗುಪ್ತಾ ಅವರಿದ್ದ ಹೋಟೆಲ್ ಕೋಣೆಗೆ ನುಗ್ಗಿ ಗುಪ್ತಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅವರ ಮನೆಯವರು ಆರೋಪಿಸಿದ್ದರು. ಹಲ್ಲೆಯ ಬಳಿಕ ಗುಪ್ತಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಪೊಲೀಸರು ವಿಳಂಬ ಮಾಡಿದ್ದರು ಎನ್ನಲಾಗಿದೆ.
ಶವಪರೀಕ್ಷೆಯ ವರದಿಯಲ್ಲಿ ಗುಪ್ತಾ ತಲೆಯ ಮಧ್ಯದಲ್ಲಿ ಊತ, ಮೊಣಕೈ ಗಂಟಿನ ಮೇಲೆ ಹಾಗೂ ತುಟಿ ಸೇರಿದಂತೆ ಅನೇಕ ಕಡೆ ಗಾಯಗಳಾಗಿರುವುದು ಕಂಡುಬಂದಿತ್ತು.
ಉತ್ತರಪ್ರದೇಶ ಸರಕಾರವು ವಿರೋಧ ಪಕ್ಷದ ನಾಯಕರ ಟೀಕೆಗಳನ್ನು ಎದುರಿಸಿದ್ದರಿಂದ ಆರು ಪೊಲೀಸರನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ. ಅಕ್ಟೋಬರ್ 10 ರಿಂದ ಆರಂಭವಾದ ಆರು ಆರೋಪಿಗಳ ಬಂಧನ ಶನಿವಾರ ಕೊನೆಗೊಂಡಿತು.