ಮಾನನಷ್ಟ ಮೊಕದ್ದಮೆ:ಅ.29 ರಂದು ಹಾಜರಾಗುವಂತೆ ರಾಹುಲ್ ಗಾಂಧಿಗೆ ಗುಜರಾತ್ ಕೋರ್ಟ್ ಸೂಚನೆ
ಅಹಮದಾಬಾದ್: ಸೂರತ್ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ತಮ್ಮ ಹೇಳಿಕೆಯನ್ನು ದಾಖಲಿಸಲು ಅಕ್ಟೋಬರ್ 29 ರಂದು ತನ್ನ ಮುಂದೆ ಹಾಜರಾಗುವಂತೆ ಸೂಚಿಸಿದೆ.
ರಾಹುಲ್ ಗಾಂಧಿ ಅವರು ಮೋದಿ ಸರ್ ನೇಮ್ ಕುರಿತು ಹೇಳಿಕೆ ನೀಡಿದ್ದಕ್ಕೆ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿತ್ತು.
ಈ ವರ್ಷ ಜೂನ್ 24 ರಂದು ಕಾಂಗ್ರೆಸ್ ನಾಯಕ ಕೊನೆಯಬಾರಿ ನ್ಯಾಯಾಲಯಕ್ಕೆ ಹಾಜರಾದಾಗಿನಿಂದ ಇಬ್ಬರು ಹೊಸ ಸಾಕ್ಷಿಗಳ ಸಾಕ್ಷ್ಯವನ್ನು ತೆಗೆದುಕೊಳ್ಳಲಾಗಿದೆ. ಸೋಮವಾರ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎ.ಎನ್. ದವೆ ಅವರು ತಮ್ಮ ಹೇಳಿಕೆಯನ್ನು ದಾಖಲಿಸಲು ಅಕ್ಟೋಬರ್ 29 ರಂದು ಹಾಜರಾಗುವಂತೆ ರಾಹುಲ್ ಗಾಂಧಿಗೆ ಸೂಚಿಸಿದರು.
"ಇಬ್ಬರು ಹೊಸ ಸಾಕ್ಷಿಗಳ ಹೇಳಿಕೆಗೆ ಸಂಬಂಧಿಸಿದಂತೆ ಹೆಚ್ಚಿನ ಹೇಳಿಕೆಯನ್ನು ದಾಖಲಿಸಲು ಅಕ್ಟೋಬರ್ 29 ರಂದು ರಾಹುಲ್ ಗಾಂಧಿಗೆ ಹಾಜರಾಗುವಂತೆ ನ್ಯಾಯಾಲಯವು ಸೋಮವಾರ ಮೌಖಿಕವಾಗಿ ಸೂಚಿಸಿದೆ. ಅವರು ಅಂದು ಮಧ್ಯಾಹ್ನ 3 ರಿಂದ 6 ರವರೆಗೆ ನ್ಯಾಯಾಲಯದ ಮುಂದೆ ಹಾಜರಾಗುವ ಸಾಧ್ಯತೆಯಿದೆ" ಎಂದು ರಾಹುಲ್ ಗಾಂಧಿ ಪರ ವಕೀಲ ಕಿರೀತ್ ಪನ್ವಾಲಾ ಹೇಳಿದರು.
ಸೂರತ್ನ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ಎಪ್ರಿಲ್ 2019 ರಲ್ಲಿ ರಾಹುಲ್ ಗಾಂಧಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 ಮತ್ತು 500 ಅಡಿಯಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು