ಪಣಜಿಯಿಂದ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿ ಮನೋಹರ್ ಪಾರಿಕ್ಕರ್ ಪುತ್ರ
photo: ANI
ಪಣಜಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಜಿಸಿರುವುದಾಗಿ ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರ ಪುತ್ರ ಉತ್ಪಲ್ ಸೋಮವಾರ ಹೇಳಿದ್ದಾರೆ.
ಪಕ್ಷದ(ಬಿಜೆಪಿ)ಜೊತೆಗೆ ಮಾತುಕತೆ ನಡೆಯುತ್ತಿದೆ. ಪಕ್ಷ ನನಗೆ ಟಿಕೆಟ್ ನೀಡುತ್ತದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.
ಬಿಜೆಪಿ ಟಿಕೆಟ್ ನಿರಾಕರಿಸಿದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ “ನಾನು ಪಣಜಿಯಿಂದ ಸ್ಪರ್ಧಿಸುತ್ತೇನೆ ಹಾಗೂ ಪಕ್ಷ ನನಗೆ ಅವಕಾಶ ನೀಡಬೇಕು. ಚರ್ಚೆಯ ನಂತರ ಪಕ್ಷವು ತನ್ನ ನಿರ್ಧಾರವನ್ನು ನನಗೆ ತಿಳಿಸುತ್ತದೆ’’ ಎಂದು ಅವರು ಹೇಳಿದರು.
"ನಾನು ಈಗಾಗಲೇ ಪಣಜಿಯಲ್ಲಿ ಜನರನ್ನು ಭೇಟಿ ಮಾಡಲು ಆರಂಭಿಸಿದ್ದೇನೆ ಹಾಗೂ ಜನರ ಆಶಯಗಳನ್ನು ಬಿಜೆಪಿಗೆ ತಿಳಿಸಿದ್ದೇನೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ನಲ್ಲಿ ಸ್ಪರ್ಧಿಸಲು ಪಕ್ಷವು ಒಲವು ತೋರಲಿದೆ. ಭೇಟಿ ನೀಡಿದ ಬಿಜೆಪಿ ನಾಯಕರಿಗೆ ನನ್ನ ಆಕಾಂಕ್ಷೆಯನ್ನು ತಿಳಿಸಿರುವೆ'' ಎಂದು ಉತ್ಪಲ್ ಹೇಳಿದರು.
ಉತ್ಪಲ್ ತನ್ನ ತಂದೆಯ ಮರಣದ ನಂತರ 2019 ರ ಉಪಚುನಾವಣೆಯಲ್ಲಿ ಪಕ್ಷದ ಟಿಕೆಟ್ಗಾಗಿ ಮುಂಚೂಣಿಯಲ್ಲಿದ್ದರು. ಆದರೆ, ಬಿಜೆಪಿ ಕೊನೆಯ ಕ್ಷಣದಲ್ಲಿ ಪಣಜಿಯ ಮಾಜಿ ಶಾಸಕ ಸಿದ್ಧಾರ್ಥ್ ಕುಂಕಾಲಿಂಕರ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿತು. ಬಿಜೆಪಿ 1994ರ ಬಳಿಕ ಮೊದಲ ಬಾರಿ ಆ ಚುನಾವಣೆಯಲ್ಲಿ ಸೋತಿತ್ತು.