ಉತ್ತರಪ್ರದೇಶ ಚುನಾವಣೆಯಲ್ಲಿ ಸಿಎಂ ಆದಿತ್ಯನಾಥ್ ವಿರುದ್ದ ಸ್ಪರ್ಧಿಸುವೆ: ಚಂದ್ರಶೇಖರ ಆಝಾದ್
ಲಕ್ನೊ: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಸ್ಪರ್ಧಿಸುವುದಾಗಿ ದಲಿತ ಮುಖಂಡ ಚಂದ್ರಶೇಖರ್ ಆಝಾದ್ ಘೋಷಿಸಿದ್ದಾರೆ.
34 ವರ್ಷದ ಆಝಾದ್ 2019 ರಲ್ಲಿ ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದ ನಂತರ ಯು-ಟರ್ನ್ ತೆಗೆದುಕೊಂಡಿದ್ದರು.
"ನಾನು ಪ್ರಧಾನಿ ವಿರುದ್ಧ ಸ್ಪರ್ಧಿಸಲು ನಿರ್ಧರಿಸಿದ್ದೆ. ಆದರೆ ಆ ಸಮಯದಲ್ಲಿ ನನ್ನ ಬಳಿ ಯಾವುದೇ ಪಕ್ಷ ಇರಲಿಲ್ಲ. ಮಾಯಾವತಿ (ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ) ನನಗೆ ವಿರೋಧ ಪಕ್ಷಗಳ ಮತಗಳನ್ನು ವಿಭಜಿಸುವ ಬದಲು ತಮ್ಮ ಅಭ್ಯರ್ಥಿಯನ್ನು ಬೆಂಬಲಿಸುವುದು ಉತ್ತಮ ಎಂದು ಹೇಳಿದ್ದರು" ಎಂದು ಚಂದ್ರಶೇಖರ್ ಆಝಾದ್ NDTV ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದರು.
ಈ ಬಾರಿ ಆಝಾದ್ ಅವರು ಆಝಾದ್ ಸಮಾಜ ಪಕ್ಷವನ್ನು ಹೊಂದಿದ್ದಾಗಿ ಹೇಳಿದ್ದಾರೆ.
"ಉತ್ತರಪ್ರದೇಶ ವಿಧಾನಸಭೆಯಲ್ಲಿ ಸ್ಥಾನ ಗೆಲ್ಲುವುದು ನನಗೆ ಮುಖ್ಯವಲ್ಲ. ಆದಿತ್ಯನಾಥ್ ಅವರು ವಿಧಾನಸಭೆಯಲ್ಲಿ ಇರಬಾರದು ಎಂಬುದು ನನಗೆ ಮುಖ್ಯವಾಗಿದೆ. ಹಾಗಾಗಿ ಅವರು ಎಲ್ಲಿ ಸ್ಪರ್ಧಿಸಿದರೂ ನಾನು ಸ್ಪರ್ಧಿಸುತ್ತೇನೆ. ಅಲ್ಲದೆ ನಾವು ಸ್ವಂತವಾಗಿ ಚುನಾವಣೆಗೆ ಸ್ಪರ್ಧಿಸಿದರೆ ದಲಿತರು, ಮುಸ್ಲಿಮರು ಅಥವಾ ಹಿಂದುಳಿದ ಜಾತಿಗಳ ಅಭ್ಯರ್ಥಿಗಳನ್ನು ಎಲ್ಲಿ ಬೇಕಾದರೂ ನಿಲ್ಲಿಸುತ್ತೇವೆ’’ ಎಂದು ಆಝಾದ್ ಹೇಳಿದರು.