ಯುಎಪಿಎ ಕರಾಳ ಕಾಯ್ದೆ ವಿರುದ್ಧ ಸುಪ್ರೀಂ ಕೋರ್ಟ್ ಕದ ತಟ್ಟಿದ ಮಾಜಿ ಅಧಿಕಾರಿಗಳ ತಂಡ
ಹೊಸದಿಲ್ಲಿ: ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಅನ್ನು ಪ್ರಶ್ನಿಸಿ ಮಾಜಿ ಐಎಎಸ್, ಐಪಿಎಸ್ ಅಧಿಕಾರಿಗಳ ತಂಡವೊಂದು ಸುಪ್ರೀಂ ಕೋರ್ಟಿನ ಕದ ತಟ್ಟಿದೆ. ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದವರ ಪೈಕಿ ನಿವೃತ್ತ ಪೊಲೀಸ್ ಅಧಿಕಾರಿ ಜೂಲಿಯೋ ರೆಬೇರೋ, ಮಾನವ ಹಕ್ಕುಗಳ ಕಾರ್ಯಕರ್ತ ಹರ್ಷ್ ಮಂದರ್ ಮತ್ತಿತರರು ಸೇರಿದ್ದಾರೆ.
ಯುಎಪಿಎ ಪ್ರಕರಣಗಳಲ್ಲಿ ಅಪರಾಧ ಸಾಬೀತಾಗುವ ಪ್ರಕರಣಗಳ ಸಂಖ್ಯೆ ಕನಿಷ್ಠವಾಗಿದೆ (ಶೇ 2.19) ಹಾಗೂ ಆರೋಪಿತರು ಹಲವಾರು ವರ್ಷಗಳ ಕಾಲ ಜೈಲಿನಲ್ಲಿಯೇ ಕೊಳೆಯುವಂತಾಗಿದೆ ಹಾಗೂ ಕೆಲವರು ಜೈಲಿನಲ್ಲಿರುವ ವೇಳೆಯೇ ಮೃತರಾದ ನಿದರ್ಶನಗಳಿವೆ ಎಂದು ಅರ್ಜಿದಾರರು ಹೇಳಿದ್ದಾರೆ.
ಜಾಮೀನು ನೀಡುವುದನ್ನು ನಿರ್ಬಂಧಿಸುವ ಕಾಯಿದೆಯ ಸೆಕ್ಷನ್ 43ಡಿ(5) ಅನ್ನು ಬೇಕಾಬಿಟ್ಟಿಯಾಗಿ ಅಸಮ್ಮತಿಯನ್ನು ಮಟ್ಟ ಹಾಕಲು ಬಳಸಲಾಗುತ್ತಿದೆ ಎಂದೂ ಅವರು ದೂರಿದ್ದಾರೆ. ಈ ನಿರ್ದಿಷ್ಟ ಸೆಕ್ಷನ್ ಅನ್ನು ರದ್ದುಗೊಳಿಸಬೇಕೆಂದೂ ಅವರು ಕೋರಿದ್ದಾರೆ.
ಕಾಯಿದೆಯಲ್ಲಿ ಉಗ್ರವಾದ ಎಂಬ ಪದ ಇಲ್ಲದೇ ಇರುವಾಗ ಒಬ್ಬ ವ್ಯಕ್ತಿ ಉಗ್ರವಾದ ಕೃತ್ಯವೆಸಗಿದ್ದಾನೆಂದು ಆರೋಪಿಸುವುದು ಸರಿಯಾಗದು ಎಂದೂ ಅವರು ಹೇಳಿದ್ದಾರೆ.
ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ನಂತರ ಕೇಂದ್ರಕ್ಕೆ ನೋಟಿಸ್ ಜಾರಿಗೊಳಿಸಿದೆ.