ಬಿಜೆಪಿ ಆಡಳಿತದಡಿಯಲ್ಲಿ ಮಾತ್ರ ಕ್ಯಾಬಿನೆಟ್ ಅನುಮತಿಯಿಲ್ಲದೆ ಕಾನೂನು ರಚಿಸಿ, ಹಿಂಪಡೆಯಲಾಗುತ್ತದೆ: ಚಿದಂಬರಂ ಆರೋಪ
ಹೊಸದಿಲ್ಲಿ: ಕ್ಯಾಬಿನೆಟ್ ಸಭೆ ನಡೆಸದೆಯೇ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಮೂರು ಕೃಷಿ ಕಾನೂನುಗಳ ವಾಪಸಾತಿ ಕುರಿತು ಘೋಷಣೆ ಮಾಡಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದಾರೆ.
"ಬಿಜೆಪಿ ಆಡಳಿತದಡಿಯಲ್ಲಿ ಮಾತ್ರ ಕ್ಯಾಬಿನೆಟ್ ಪೂರ್ವಾನುಮತಿಯಿಲ್ಲದೆ ಕಾನೂನುಗಳನ್ನು ರಚಿಸಲಾಗುತ್ತದೆ ಮತ್ತು ವಾಪಸ್ ಪಡೆಯಲಾಗುತ್ತದೆ" ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಪ್ರಧಾನಿಯ ಘೋಷಣೆಯ ಬೆನ್ನಿಗೇ ಅವರನ್ನು ಶ್ಲಾಘಿಸಿದ ಬಿಜೆಪಿ ನಾಯಕರುಗಳನ್ನೂ ಚಿದಂಬರಂ ಟೀಕಿಸಿದ್ದಾರೆ. "ಈ ನಾಯಕರು ಮತ್ತು ಅವರ ಜಾಣ ಸಲಹೆಗಳು ಕಳೆದ 15 ತಿಂಗಳುಗಳಲ್ಲಿ ಎಲ್ಲಿದ್ದವು?" ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.
ಶುಕ್ರವಾರ ಕೂಡ ಚಿದಂಬರಂ ಪ್ರತಿಕ್ರಿಯಿಸಿ, ಮನಸ್ಸು ಬದಲಾಗಿದ್ದಲ್ಲ, ಬದಲು ಮುಂಬರುವ ಚುನಾವಣೆಗಳಲ್ಲಿ ಸೋಲುವ ಭಯದಿಂದ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಲಾಗಿದೆ ಎಂದಿದ್ದರು. ಆದರೆ ಸರಕಾರದ ಈ ನಿರ್ಧಾರ ರೈತರಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಜಯ ಎಂದಿದ್ದರು. "ಪ್ರಜಾಸತ್ತಾತ್ಮಕ ಪ್ರತಿಭಟನೆಗಳಿಂದ ಸಾಧಿಸಲಾಗದೇ ಇದ್ದುದು ಮುಂಬರುವ ಚುನಾವಣೆಗಳ ಭಯ ಸಾಧಿಸಿದೆ" ಎಂದೂ ಅವರು ಹೇಳಿದ್ದರು.