‘ತ್ರಿಪುರಾದಲ್ಲಿ ಪ್ರಜಾಪ್ರಭುತ್ವವಿಲ್ಲ’:ಮುಖ್ಯಮಂತ್ರಿ ವಿರುದ್ಧವೇ ಬಿಜೆಪಿ ನಾಯಕರ ವಾಗ್ದಾಳಿ
ಗುವಾಹಟಿ: ಈಗಾಗಲೇ ತೃಣಮೂಲ ಕಾಂಗ್ರೆಸ್ ನಿಂದ ವಾಗ್ದಾಳಿಗೆ ಒಳಗಾಗಿರುವ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಇದೀಗ ತಮ್ಮ ಪಕ್ಷದ ಇಬ್ಬರು ಪ್ರಮುಖ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
"ತ್ರಿಪುರಾದಲ್ಲಿ ಪ್ರಜಾಪ್ರಭುತ್ವ ಇಲ್ಲ" ಎಂದು ಘೋಷಿಸಿದ ಬಿಜೆಪಿ ಶಾಸಕರಾದ ಸುದೀಪ್ ರಾಯ್ ಬರ್ಮನ್ ಹಾಗೂ ಆಶಿಶ್ ಸಹಾ ಅವರು "ರಾಜ್ಯದಲ್ಲಿ ನಡೆಯುತ್ತಿರುವ ಗೂಂಡಾಗಿರಿ" ಹಾಗೂ "ಆಡಳಿತ ಪಕ್ಷದ ಗೂಂಡಾಗಳ" ಬೆದರಿಕೆಗಳ ವಿರುದ್ಧ ತಮ್ಮ ಮತ ಚಲಾಯಿಸುವಂತೆ ಜನರನ್ನು ಒತ್ತಾಯಿಸಿದ್ದಾರೆ ಎಂದು NDTV ವರದಿ ಮಾಡಿದೆ.
ಮುಖ್ಯಮಂತ್ರಿಯನ್ನು ಹೆಸರಿಸದೆ ವಾಗ್ದಾಳಿ ನಡೆಸಿದ ರಾಯ್ ಬರ್ಮನ್, "ಪ್ಯಾರಾಚೂಟಿಸ್ಟ್ ನಾಯಕ" ಸಿಪಿಎಂನಿಂದ ಪಕ್ಷಾಂತರವಾಗಿರುವ ಬಿಜೆಪಿ ಗೂಂಡಾಗಳನ್ನು ಬಳಸುತ್ತಿದ್ದಾರೆ. ಯಾವುದೇ ವಿಧಾನದಿಂದ ಚುನಾವಣೆ ಗೆಲ್ಲುವ ಮೂಲಕ ಕೇಂದ್ರ ನಾಯಕತ್ವದ ಗಮನ ಸೆಳೆಯುವುದು ದೇಬ್ ಅವರ ವೈಯಕ್ತಿಕ ಅಜೆಂಡಾ ಎಂದು ಅವರು ಹೇಳಿದ್ದಾರೆ.
"ಒಮ್ಮೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕಮ್ಯುನಿಸ್ಟರನ್ನು ತೆಗೆದುಹಾಕಲು ಹಾಗೂ ಬಿಜೆಪಿಯನ್ನು ಅಧಿಕಾರಕ್ಕೆ ತರಲು ತಮ್ಮ ಹಣವನ್ನು ಖರ್ಚು ಮಾಡಿದ ಜನರ ವಿರುದ್ಧ ರಾಜ್ಯಾದ್ಯಂತ ದೊಡ್ಡ ಪ್ರಮಾಣದ ಹಿಂಸಾಚಾರ ನಡೆದಿದೆ" ಎಂದು 54 ವರ್ಷದ ಮಾಜಿ ಸಚಿವ ಹೇಳಿದರು.