ಭಾರತಕ್ಕೆ ಸಾವರ್ಕರ್ ಯುಗ ಈಗಾಗಲೇ ಬಂದಿದೆ: ಕೇಂದ್ರ ಮಾಹಿತಿ ಆಯುಕ್ತ ಉದಯ್ ಮಹೂರ್ಕರ್
"ಅವರ ವ್ಯಕ್ತಿತ್ವವು ಭಾರತ ರತ್ನಕ್ಕಿಂತ ಮೇಲಿದೆ"
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಹಿಂದುತ್ವ ಸಿದ್ಧಾಂತದ ಶಿಲ್ಪಿ ಎಂದು ಕರೆಯಲ್ಪಡುವ ವಿ.ಡಿ. ಸಾವರ್ಕರ್ ಅವರ ಯುಗವು ಭಾರತದಲ್ಲಿ ಈಗಾಗಲೇ ಪ್ರಾರಂಭವಾಗಿದೆ ಹಾಗೂ ಅವರ ವ್ಯಕ್ತಿತ್ವವು ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನಕ್ಕಿಂತ ಮೇಲಿದೆ ಎಂದು ಕೇಂದ್ರ ಮಾಹಿತಿ ಆಯುಕ್ತ (ಸಿಐಸಿ) ಉದಯ್ ಮಹೂರ್ಕರ್ ರವಿವಾರ ಹೇಳಿದ್ದಾರೆ.
“ಸಾವರ್ಕರ್ (ಅಂತಸ್ತು) ಭಾರತ ರತ್ನಕ್ಕಿಂತ ಮೇಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರಿಗೆ ಪ್ರಶಸ್ತಿ ಬಂದರೆ ಪರವಾಗಿಲ್ಲ. ಆದರೆ ಭಾರತದಲ್ಲಿ ಸಾವರ್ಕರ್ ಯುಗವು ಈಗಾಗಲೇ ಪ್ರಾರಂಭವಾಗಿರುವುದರಿಂದ ಈ ಪ್ರಶಸ್ತಿಯನ್ನು ಅವರು ಪಡೆಯದಿದ್ದರೂ ಕೂಡ ಅವರ ಸ್ಥಾನಮಾನದ ಮೇಲೆ ಪರಿಣಾಮ ಬೀರಲಾರದು ಎಂದು ಇಂಧೋರ್ ಸಾಹಿತ್ಯೋತ್ಸವದಲ್ಲಿ ಭಾಗವಹಿಸುತ್ತಿರುವ ಮಹೂರ್ಕರ್ ಅವರು ಪಿಟಿಐಗೆ ತಿಳಿಸಿದರು.
2019 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ತನ್ನ ನೇತೃತ್ವದ ಪಕ್ಷವು ಅಧಿಕಾರವನ್ನು ಉಳಿಸಿಕೊಂಡರೆ ಸಾವರ್ಕರ್ ಹೆಸರನ್ನು ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಹೇಳಿತ್ತು.
"ಜಮ್ಮು-ಕಾಶ್ಮೀರದಲ್ಲಿ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಲಾಗುವುದು ಎಂದು ನಾವು ಊಹೆ ಮಾಡಿರಲಿಲ್ಲ. ಆದರೆ ಅದನ್ನು ರದ್ದುಗೊಳಿಸಲಾಗಿದೆ. ಈ ಹೆಜ್ಜೆಯು ಭಾರತದಲ್ಲಿ ಸಾವರ್ಕರ್ ಯುಗದ ಅರುಣೋದಯವನ್ನು ಗುರುತಿಸಿದೆ,” ಎಂದು ‘ವೀರ್ ಸಾವರ್ಕರ್: ದಿ ಮ್ಯಾನ್ ಹೂ ಕುಡ್ ಹ್ಯಾವ್ ಪ್ರಿವೆಂಟೆಡ್ ಪಾರ್ಟಿಷನ್’ ಲೇಖಕ ಮಹೂರ್ಕರ್ ಹೇಳಿದರು.