ಪಂಜಾಬ್ ಮೈತ್ರಿಗಾಗಿ ಅಮರಿಂದರ್ ಸಿಂಗ್, ಸುಖದೇವ್ ಸಿಂಗ್ ಜೊತೆ ಮಾತುಕತೆ: ಅಮಿತ್ ಶಾ
ಹೊಸದಿಲ್ಲಿ: ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಮೈತ್ರಿ ಮಾಡಿಕೊಳ್ಳಲು ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್ ಹಾಗೂ ಶಿರೋಮಣಿ ಅಕಾಲಿದಳದ ಮಾಜಿ ನಾಯಕ ಸುಖದೇವ್ ಸಿಂಗ್ ದಿಂಡ್ಸಾ ಅವರೊಂದಿಗೆ ಬಿಜೆಪಿ ಮಾತುಕತೆ ನಡೆಸುತ್ತಿದೆ ಎಂದು ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.
ಸಿಂಗ್ ಅವರು ಕಾಂಗ್ರೆಸ್ ತೊರೆದು ತಮ್ಮದೇ ಆದ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿ ಹಲವಾರು ಬಾರಿ ಮೈತ್ರಿ ಬಗ್ಗೆ ಮಾತನಾಡಿದ್ದರು.
“ನಾವು ಕ್ಯಾಪ್ಟನ್ ಸಾಬ್ (ಅಮರಿಂದರ್ ಸಿಂಗ್) ಹಾಗೂ ದಿಂಡ್ಸಾಸಾಬ್ ಅವರೊಂದಿಗೆ ಮಾತನಾಡುತ್ತಿದ್ದೇವೆ. ನಾವು ಎರಡೂ (ಅವರ) ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿದೆ. ನಾವು ಎರಡೂ ಪಕ್ಷಗಳೊಂದಿಗೆ ಸಕಾರಾತ್ಮಕ ಮನಸ್ಸಿನಿಂದ ಮಾತನಾಡುತ್ತಿದ್ದೇವೆ’’ ಎಂದು ಶಾ ಹೇಳಿದರು.
ಸಿಂಗ್ ಅವರು ಸೋಮವಾರ ರಾಷ್ಟ್ರ ರಾಜಧಾನಿ ತಲುಪಿ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಂತರ ಮೂರು ಪಕ್ಷಗಳು ತಮ್ಮ ಮೈತ್ರಿಯನ್ನು ಔಪಚಾರಿಕವಾಗಿ ಘೋಷಿಸುವ ಸಾಧ್ಯತೆಯಿದೆ.
ಪಂಜಾಬ್ ಹಾಗೂ ಉತ್ತರ ಪ್ರದೇಶದ ಚುನಾವಣೆಗಳ ಮೇಲೆ ರೈತರ ಪ್ರತಿಭಟನೆ ಪರಿಣಾಮ ಬೀರುವ ಸಾಧ್ಯತೆಯನ್ನು ಶಾ ತಳ್ಳಿಹಾಕಿದರು. ಕೃಷಿ ಕಾನೂನು ರದ್ದತಿಯ ನಂತರ ಪಂಜಾಬ್ ನಲ್ಲಿ ಯಾವ ಸಮಸ್ಯೆಯೂ ಉಳಿದಿಲ್ಲ ಎಂದರು.