ಚಳಿಗಾಲದ ಅಧಿವೇಶನ: ಮೊದಲ ವಾರದಲ್ಲಿ ಕಲಾಪ ವ್ಯತ್ಯಯಗಳಿಂದ ರಾಜ್ಯಸಭೆಯ ಶೇ.52ರಷ್ಟು ಸಮಯ ವ್ಯರ್ಥ
ಹೊಸದಿಲ್ಲಿ,ಡಿ.5: ಕಳೆದ ವಾರ ವ್ಯತ್ಯಯಗಳು ಮತ್ತು ಪ್ರತಿಭಟನೆಗಳಿಂದಾಗಿ ರಾಜ್ಯಸಭೆಯ ಶೇ.52ರಷ್ಟು ನಿಗದಿತ ಬೈಠಕ್ ಸಮಯವು ವ್ಯರ್ಥಗೊಂಡಿದೆ,ಆದರೆ ಗುರುವಾರ ಮತ್ತು ಶುಕ್ರವಾರ ಹೆಚ್ಚಿನ ಉತ್ಪಾದಕತೆ ಕಂಡು ಬಂದಿದ್ದು ಸದನ ಕಲಾಪಗಳು ಸಹಜ ಸ್ಥಿತಿಗೆ ಮರಳುವ ಆಸೆಯನ್ನು ಮೂಡಿಸಿದೆ.
ಮಳೆಗಾಲದ ಅಧಿವೇಶನದ ಕೊನೆಯ ದಿನದ ಗದ್ದಲಕ್ಕಾಗಿ 12 ರಾಜ್ಯಸಭಾ ಸಂಸದರ ಅಮಾನತು ಸೇರಿದಂತೆ ಹಲವಾರು ವಿಷಯಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಸಂಸದರು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.
ಅಮಾನತು ಕ್ರಮವು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಮತ್ತು ‘ಆಯ್ದ’ ಸದಸ್ಯರನ್ನು ಅಮಾನತು ಮಾಡಲಾಗಿದೆ ಎಂದು ಪ್ರತಿಪಕ್ಷ ಸದಸ್ಯರು ಟೀಕಿಸಿದ್ದರೆ,ಅಮಾನತು ಕ್ರಮವನ್ನು ಹಿಂದೆಗೆದುಕೊಳ್ಳಲು ನಿರಾಕರಿಸಿರುವ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು, ಅಮಾನತುಗೊಂಡಿರುವ ಸದಸ್ಯರು ವಿಷಾದವನ್ನು ವ್ಯಕ್ತಪಡಿಸಿಲ್ಲ ಎಂದು ಒತ್ತಿ ಹೇಳಿದ್ದಾರೆ. ಆದಾಗ್ಯೂ ಅಮಾನತು ವಿಷಯದ ಬಗ್ಗೆ ಅಭಿಪ್ರಾಯವನ್ನು ತಳೆಯುವುದು ಸದನಕ್ಕೆ ಬಿಟ್ಟ ವಿಷಯವಾಗಿದೆ ಮತ್ತು ಅದನ್ನು ಮುಂದುವರಿಸುವದು ಸಂಬಂಧಿತ ಎಲ್ಲರಿಗೆ ಸೇರಿದ್ದಾಗಿದೆ ಎಂದಿದ್ದಾರೆ.
ಹಿಮ್ಮೆಟ್ಟಲು ಸಿದ್ಧರಿಲ್ಲದ ಅಮಾನತುಗೊಂಡಿರುವ ಸಂಸದರು ಸಂಸತ್ ಆವರಣದಲ್ಲಿಯ ಮಹಾತ್ಮಾ ಗಾಂಧಿ ಪುತ್ಥಳಿಯ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಪಕ್ಷ ಸದಸ್ಯರು ಕ್ಷಮೆ ಯಾಚಿಸಿದರೆ ಅಮಾನತನ್ನು ಹಿಂದೆಗೆದುಕೊಳ್ಳುವುದನ್ನು ಪರಿಗಣಿಸಲು ಸರಕಾರವು ಸಿದ್ಧವಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಕಳೆದ ವಾರ ಸದನದ ಉತ್ಪಾದಕತೆಯು ನಿಗದಿತ ಸಮಯದ ಶೇ.47.70ರಷ್ಟಿತ್ತು. ಗುರುವಾರ ಸದನವು ನಿಗದಿತ ಸಮಯಕ್ಕಿಂತ 33 ನಿಮಿಷ ಹೆಚ್ಚು ಕಾರ್ಯ ನಿರ್ವಹಿಸಿದ್ದು ವಾರದ ಒಟ್ಟಾರೆ ಉತ್ಪಾದಕತೆಯನ್ನು ಶೇ.49.70ಕ್ಕೆ ಹೆಚ್ಚಿಸಿದೆ ಎಂದು ಹೇಳಿಕೆಯು ತಿಳಿಸಿದೆ.
ಗುರುವಾರ ಮತ್ತು ಶುಕ್ರವಾರ ಅನುಕ್ರಮವಾಗಿ ಶೇ.95 ಮತ್ತು 100ರಷ್ಟು ಉತ್ಪಾದಕತೆ ದಾಖಲಾಗಿದ್ದು,ಇದು ವಾರದಲ್ಲಿ ಗರಿಷ್ಠವಾಗಿದೆ ಎಂದು ತಿಳಿಸಿರುವ ಹೇಳಿಕೆಯು,ಸದನವು ಶುಕ್ರವಾರ ಎರಡೂವರೆ ಗಂಟೆಗಳ ಪೂರ್ಣ ನಿಗದಿತ ಅವಧಿಗೆ ಖಾಸಗಿ ಸದಸ್ಯರ ಕಲಾಪಗಳನ್ನು ಕೈಗೆತ್ತಿಕೊಂಡಿತ್ತು. ಹಿಂದಿನ ಸಲ ಬಜೆಟ್ ಅಧಿವೇಶನದ ಸಂದರ್ಭ 2020,ಫೆ.7ರಂದು ಹೀಗೆ ನಡೆದಿತ್ತು ಎಂದಿದೆ.
ಅಧಿವೇಶನದ ಮೊದಲ ವಾರದಲ್ಲಿ ಕೃಷಿ ಕಾಯ್ದೆಗಳ ರದ್ದು ಮಸೂದೆ ಮತ್ತು ಅಣೆಕಟ್ಟು ಸುರಕ್ಷತೆ ಮಸೂದೆಗಳನ್ನು ರಾಜ್ಯಸಭೆಯು ಅಂಗೀಕರಿಸಿದೆ.