ನಾಗಾಲ್ಯಾಂಡ್ ನಾಗರಿಕರ ಹತ್ಯೆ: ಎಎಫ್ಎಸ್ಪಿಎ ಮರು ಪರಿಶೀಲಿಸಲು ಟಿಎಂಸಿ ಆಗ್ರಹ
ಹೊಸದಿಲ್ಲಿ, ಡಿ. 9: ನಾಗಾಲ್ಯಾಂಡ್ನಲ್ಲಿ ಭದ್ರತಾ ಪಡೆ 14 ಮಂದಿ ನಾಗರಿಕರ ಹತ್ಯೆಗೈದಿರುವುದರಲ್ಲಿ ಶಸಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಎಎಫ್ಎಸ್ಪಿಎ) ಯ ಪಾತ್ರ ಹಾಗೂ ಈ ಕಾಯ್ದೆಯ ದುರ್ಬಳಕೆ ಕುರಿತು ಪರಿಶೀಲಿಸುವಂತೆ ತೃಣಮೂಲ ಕಾಂಗ್ರೆಸ್ ಬುಧವಾರ ಕೇಂದ್ರ ಸರಕಾರವನ್ನು ಆಗ್ರಹಿಸಿದೆ. ಅಲ್ಲದೆ, ಈ ಕಾಯ್ದೆಯನ್ನು ರದ್ದುಪಡಿಸುವಂತೆ ಕೋರಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿರುವ ಟಿಎಂಸಿ ಸಂಸದರ ನಿಯೋಗ, ಸಂತ್ರಸ್ತರ ಕುಟುಂಬಗಳಿಗೆ ಸಾಕಷ್ಟು ಪರಿಹಾರ ಹಾಗೂ ತಪ್ಪೆಸಗಿದವರಿಗೆ ಅನುಕರಣೀಯ ಶಿಕ್ಷೆ ನೀಡುವಂತೆ ಆಗ್ರಹಿಸಿದೆ. ನಾಗಾಲ್ಯಾಂಡ್ನ ಮೊನ್ ಜಿಲ್ಲೆಯ ಓಟಿಂಗ್ ಗ್ರಾಮದಲ್ಲಿ ಸೇನಾ ಪಡೆ ಶನಿವಾರ ನಡೆಸಿದ ಹೊಂಚು ದಾಳಿಯಲ್ಲಿ 6 ಮಂದಿ ನಾಗರಿಕರು ಮೃತಪಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಮೊನ್ ಜಿಲ್ಲೆಯಲ್ಲಿ ಭುಗಿಲೆದ್ದ ಹಿಂಸಾಚಾರದ ಸಂದರ್ಭ ಭದ್ರತಾ ಪಡೆಗಳು ನಡೆಸಿದ ಗೋಲಿಬಾರ್ನಲ್ಲಿ ಮತ್ತೆ 8 ಮಂದಿ ನಾಗರಿಕರು ಸಾವನ್ನಪ್ಪಿದ್ದರು. ಓರ್ವ ಯೋಧ ಸಾವನ್ನಪ್ಪಿದ್ದರು ಹಾಗೂ ಹಲವು ಯೋಧರು ಗಾಯಗೊಂಡಿದ್ದರು. ಈ ನಡುವೆ ಈ ವಲಯದಲ್ಲಿ ಎಎಫ್ಎಸ್ಪಿಎಯನ್ನು ರದ್ದುಗೊಳಿಸುವಂತೆ ನಾಗಾಲ್ಯಾಂಡ್ ಮುಖ್ಯಮಂತ್ರಿ ನೈಫಿಯು ರಿಯೊ ಹಾಗೂ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಆಗ್ರಹಿಸಿದ್ದಾರೆ.