ಕೃಷಿ ಕಾನೂನುಗಳನ್ನು ಕೇಂದ್ರ ವಾಪಸ್ ತರುವುದಿಲ್ಲ: ಕಾಂಗ್ರೆಸ್ ಟೀಕೆಯ ಬಳಿಕ ಕೃಷಿ ಸಚಿವರ ಯೂ ಟರ್ನ್
ಗ್ವಾಲಿಯರ್ (ಮಧ್ಯಪ್ರದೇಶ): ಕೇಂದ್ರವು ಕೃಷಿ ಕಾನೂನುಗಳನ್ನು ತಿದ್ದುಪಡಿ ರೂಪದಲ್ಲಿ ಮತ್ತೆ ಜಾರಿಗೆ ತರುವುದಿಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಶನಿವಾರ ಸ್ಪಷ್ಟಪಡಿಸಿದ್ದಾರೆ.
ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ನಂತರ ತಿದ್ದುಪಡಿಗಳೊಂದಿಗೆ ಕೇಂದ್ರವು ಮೂರು ಕೃಷಿ ಕಾನೂನುಗಳನ್ನು (ಈಗ ರದ್ದುಗೊಳಿಸಲಾಗಿದೆ) ಮರಳಿ ತರಲು ಯೋಜಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದ ನಂತರ ಕೇಂದ್ರ ಸಚಿವರಿಂದ ಈ ಸ್ಪಷ್ಟನೆ ಬಂದಿದೆ.
ಶುಕ್ರವಾರ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈಗ ರದ್ದುಪಡಿಸಲಾಗಿರುವ ಕೃಷಿ ಕಾನೂನನ್ನು ಮತ್ತೆ ಜಾರಿಗೆ ತರುವುದಾಗಿ "ನಾನು ಹೇಳಿಯೇ ಇಲ್ಲ" ಎಂದು ತೋಮರ್ ಉತ್ತರಿಸಿದರು.
"ಸರಕಾರವು ಉತ್ತಮ (ಕೃಷಿ) ಕಾನೂನುಗಳನ್ನು ಮಾಡಿದೆ ಎಂದು ನಾನು ಹೇಳಿದ್ದೇನೆ. ಕೆಲವು ಕಾರಣಗಳಿಂದ ನಾವು ಅವುಗಳನ್ನು ಹಿಂದಕ್ಕೆ ತೆಗೆದುಕೊಂಡಿದ್ದೇವೆ. ಸರಕಾರವು ರೈತರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತದೆ" ಎಂದು ಸಚಿವರು ಹೇಳಿದರು.
ಈ ಮೊದಲು ನಾಗ್ಪುರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ತೋಮರ್ "ನಾವು ಕೃಷಿ ಕಾನೂನುಗಳನ್ನು ತಂದಿದ್ದೇವೆ. ಕೆಲವರು ಅದನ್ನು ಇಷ್ಟಪಡಲಿಲ್ಲ ಆದರೆ ಇದು ಸ್ವಾತಂತ್ರ್ಯ ಲಭಿಸಿದ 70 ವರ್ಷಗಳ ನಂತರ ನರೇಂದ್ರ ಮೋದಿಜಿ ನಾಯಕತ್ವದಲ್ಲಿ ತಂದಿರುವ ದೊಡ್ಡ ಸುಧಾರಣೆಯಾಗಿದೆ. ಆದರೆ ಸರಕಾರ ನಿರಾಶೆಗೊಂಡಿಲ್ಲ. ನಾವು ಒಂದು ಹೆಜ್ಜೆ ಹಿಂದೆ ಸರಿದಿದ್ದೇವೆ ಮತ್ತು ನಾವು ಮತ್ತೆ ಮುನ್ನಡೆಯುತ್ತೇವೆ. ಏಕೆಂದರೆ ರೈತರು ಭಾರತದ ಬೆನ್ನೆಲುಬು ಮತ್ತು ಬೆನ್ನೆಲುಬು ಗಟ್ಟಿಗೊಂಡರೆ ದೇಶವು ಸದೃಢವಾಗುತ್ತದೆ’’ ಎಂದಿದ್ದರು.