ನಷ್ಟ ಭರಿಸಲು ಸಾಧ್ಯವಿಲ್ಲ: ಏರ್ ಇಂಡಿಯಾ ಖಾಸಗೀಕರಣವನ್ನು ಸಮರ್ಥಿಸಿದ ಕೇಂದ್ರ
ಫೈಲ್ ಚಿತ್ರ
ಹೊಸದಿಲ್ಲಿ: ಏರ್ ಇಂಡಿಯಾ ಬಂಡವಾಳ ಹಿಂತೆಗೆತ ಪ್ರಕ್ರಿಯೆ ವಿರುದ್ಧ ದಿಲ್ಲಿ ಹೈಕೋರ್ಟ್ನಲ್ಲಿ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿರುವ ಅರ್ಜಿಗೆ ಕೇಂದ್ರ ಸರ್ಕಾರ ತನ್ನ ವಿರೋಧ ದಾಖಲಿಸಿದೆ.
ಏರ್ ಇಂಡಿಯಾವು ನಿರಂತರ ನಷ್ಟದಲ್ಲಿದೆ. ದಿನವೊಂದಕ್ಕೆ 20 ಕೋಟಿ ರೂ. ನಷ್ಟವಾಗುತ್ತಿದೆ. ಇಷ್ಟೊಂದು ನಷ್ಟವನ್ನು ಭರಿಸಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಸರ್ಕಾರ ನ್ಯಾಯಾಲಯದ ಮುಂದೆ ಹೇಳಿದೆ.
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ನಿರಂತರ ನಷ್ಟದಿಂದಾಗಿ 2017 ರಲ್ಲಿ ಏರ್ ಇಂಡಿಯಾದ ಶೇರುಗಳನ್ನು ಮಾರಾಟ ಮಾಡುವ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ ಅವರು, ಈ ನಿರ್ಧಾರವನ್ನು ನ್ಯಾಯಸಮ್ಮತವೆಂದು ವಾದಿಸಿದ್ದಾರೆ.
ಏರ್ ಇಂಡಿಯಾದ ಬಂಡವಾಳ ಹಿಂಪಡೆತ ಪ್ರಕ್ರಿಯೆಯು ನಿರಂಕುಶವಾದದ್ದು ಎಂದು ಸ್ವಾಮಿ ಅರ್ಜಿಯಲ್ಲಿ ಹೇಳಿದ್ದರು.
ಅರ್ಜಿಯ ವಿಚಾರಣೆ ಆಲಿಸಿದ ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಹಾಗೂ ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ನ್ಯಾಯಪೀಠವು ಅರ್ಜಿಯ ಕುರಿತಾದ ಆದೇಶವನ್ನು ಜನವರಿ 6 ರಂದು ನೀಡುವುದಾಗಿ ಹೇಳಿದೆ. ಅದರ ಮೊದಲು ಅರ್ಜಿಯೊಂದಿಗೆ ಲಗತ್ತಿಸಲಾದ ಕೆಲವು ದಾಖಲೆಗಳ ಸ್ಪಷ್ಟವಾದ ಪ್ರತಿಗಳನ್ನು ಸಲ್ಲಿಸುವಂತೆ ನ್ಯಾಯಾಲಯವು ಅರ್ಜಿದಾರರಿಗೆ ತಿಳಿಸಿದೆ.