'ದಿಲ್ಲಿ ಗಲಭೆಯ ಹಿಂದೆ ಸರಕಾರವನ್ನು ಬಗ್ಗಿಸುವ ಸಂಚು': ಉಮರ್ ಖಾಲಿದ್ ಜಾಮೀನು ಅರ್ಜಿ ವಿರೋಧಿಸಿದ ಪ್ರಾಸಿಕ್ಯೂಶನ್
ಉಮರ್ ಖಾಲಿದ್
ಹೊಸದಿಲ್ಲಿ: ಈಶಾನ್ಯ ದಿಲ್ಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಯುಎಪಿಎ ಕಾನೂನಿನಡಿ ಬಂಧಿತರಾಗಿರುವ ಜೆಎನ್ಯುವಿನ ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರ ಜಾಮೀನು ಅರ್ಜಿಯನ್ನು ಮಂಗಳವಾರ ಪ್ರಾಸಿಕ್ಯೂಶನ್ ಬಲವಾಗಿ ವಿರೋಧಿಸಿದೆಯಲ್ಲದೆ "ಸರಕಾರವನ್ನು ಬಗ್ಗಿಸುವುದು'' ಈ ಗಲಭೆಯ ಹಿಂದಿನ ಸಂಚಿನ ಅಂತಿಮ ಉದ್ದೇಶವಾಗಿದೆ ಎಂದು ಹೇಳಿದೆ ಎಂದು indianexpress.com ವರದಿ ಮಾಡಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಮುಂದೆ ವಿಶೇಷ ಸಾರ್ವಜನಿಕ ಅಭಿಯೋಜಕ ಅಮಿತ್ ಪ್ರಸಾದ್ ಮೇಲಿನಂತೆ ವಾದ ಮಂಡಿಸಿದ್ದಾರೆ. "ಸಿಎಎ ಜಾರಿಗೊಳಿಸಿದ ಸರಕಾರವನ್ನು ಬಗ್ಗಿಸಿ, ಪ್ರಜಾಪ್ರಭುತ್ವವನ್ನು ಅಸ್ಥಿರಗೊಳಿಸಿ ಸಿಎಎ ವಾಪಸ್ ಪಡೆಯುವಂತೆ ಒತ್ತಡ ಹೇರುವುದು,'' ಈ ಗಲಭೆಯ ಹಿಂದಿನ ಉದ್ದೇಶ ಎಂದು ಅವರು ವಾದಿಸಿದ್ದಾರೆ.
"ಈ ಗಲಭೆಯು ಗೌಪ್ಯವಾಗಿ ನಡೆಸಿದ ಕ್ರಿಮಿನಲ್ ಸಂಚಿನ ಫಲವಾಗಿದೆ ಎಂಬುದು ಸ್ಪಷ್ಟ. ಇದನ್ನು ಮುಚ್ಚಿ ಹಾಕಲು ಸ್ಪಷ್ಟ ಯತ್ನಗಳು ನಡೆದಿವೆ. ಸಾಂದರ್ಭಿಕ ಸಾಕ್ಷ್ಯದ ಆಧಾರದಲ್ಲಿ ಸಂಚನ್ನು ಸಾಬೀತುಪಡಿಸಬೇಕಿದೆ ಹಾಗೂ ಈ ಗಲಭೆಯು ಏಕಾಏಕಿ ಸಂಭವಿಸಿದ್ದಲ್ಲ,'' ಎಂದು ಅವರು ನ್ಯಾಯಾಲಯದ ಮುಂದೆ ಹೇಳಿದ್ದಾರೆ.
ಪೊಲೀಸರು ಸಲ್ಲಿಸಿದ ಚಾರ್ಜ್ಶೀಟ್ ಎಂಬುದು ತನಿಖಾಧಿಕಾರಿಯ ಕಲ್ಪನೆಯಂತಿದೆ ಹಾಗೂ ವೆಬ್ ಸರಣಿಯ ಸ್ಕ್ರಿಪ್ಟ್ನಂತಿದೆ ಎಂದು ಖಾಲಿದ್ ಅವರ ವಕೀಲ ತ್ರಿದೀಪ್ ಪಾಯಸ್ ಅವರ ಹೇಳಿಕೆಯನ್ನು ಅಮಿತ್ ಪ್ರಸಾದ್ ಪ್ರಶ್ನಿಸಿದರು.
"ತನಿಖಾ ಏಜನ್ಸಿಯು ಕೋಮುವಾದಿಯಾಗಿದೆ ಎಂದು ಪಾಯಸ್ ಹೇಳಿರುವುದು ದುರಾದೃಷ್ಟಕರ, ದಿಲ್ಲಿ ಹಿಂಸಾಚಾರ ಪ್ರಕರಣದಲ್ಲಿ ಮೊದಲು ಶಿಕ್ಷೆಗೊಳಗಾಗಿರುವ ವ್ಯಕ್ತಿ ಒಬ್ಬ ಹಿಂದು,'' ಎಂದು ಅವರು ಹೇಳಿದರು.