ಹತ್ಯೆ ಯತ್ನ ಪ್ರಕರಣ: ಬಿಜೆಪಿ ಶಾಸಕ ನಿತೀಶ್ ರಾಣೆಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬಾಂಬೆ ಹೈಕೋರ್ಟ್
ಹೊಸದಿಲ್ಲಿ: ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರದ ಬಿಜೆಪಿ ಶಾಸಕ ನಿತೇಶ್ ರಾಣೆ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಬಾಂಬೆ ಉಚ್ಚ ನ್ಯಾಯಾಲಯ ಸೋಮವಾರ ನಿರಾಕರಿಸಿದೆ.
ಕೇಂದ್ರ ಸಚಿವ ನಾರಾಯಣ ರಾಣೆ ಅವರ ಪುತ್ರ ನಿತೇಶ್ ರಾಣೆ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಮಹಾರಾಷ್ಟ್ರ ಸರಕಾರ ಈ ಹಿಂದೆ ನೀಡಿದ ಭರವಸೆ ಜನವರಿ 27ರ ವರೆಗೆ ಮುಂದುವರಿಯಲಿದೆ. ಅದು ಕೊನೆಯ ಅವಕಾಶ ಆಗಿರಲಿದೆ ಎಂದು ನ್ಯಾಯಮೂರ್ತಿ ಸಿ.ವಿ. ಭಂದಂಗೆ ಅವರ ಏಕ ಸದಸ್ಯ ಪೀಠ ಹೇಳಿದೆ.
ನಿತೀಶ್ ರಾಣೆ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ನ್ಯಾಯಮೂರ್ತಿ ಭದಂಗೆ ನಿರಾಕರಿಸಿದ್ದಾರೆ. ಇದೇ ಪ್ರಕರಣದಲ್ಲಿ ಸಂದೇಶ್ ಆಲಿಯಾಸ್ ಗೊಟ್ಯ ಸಾವಂತ್ ಇನ್ನೋರ್ವ ಆರೋಪಿ. ಆದರೆ, ಸಹ ಆರೋಪಿಯಾಗಿರುವ ಮನೀಶ್ ದಲ್ವಿಗೆ ನ್ಯಾಯಾಲಯ ಜಾಮೀನು ನೀಡಿದೆ.
ನಿರೀಕ್ಷಣಾ ಜಾಮೀನು ಅರ್ಜಿಯನ್ನು ಡಿಸೆಂಬರ್ 31ರಂದು ಸಿಂಧುದುರ್ಗಾ ಜಿಲ್ಲೆಯ ಸ್ಥಳೀಯ ನ್ಯಾಯಾಲಯ ತಿರಸ್ಕರಿಸಿದ ಬಳಿಕ ನಿತೀಶ್ ರಾಣೆ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ ಮನವಿಯನ್ನು ಬಾಂಬೈ ಉಚ್ಚ ನ್ಯಾಯಾಲಯ ವಿಚಾರಣೆ ನಡೆಸಿತು.