ಪದ್ಮಭೂಷಣಕ್ಕೆ ಪಾತ್ರರಾದ ಗುಲಾಮ್ ನಬಿ ಆಝಾದ್, ಬುದ್ಧದೇವ್ ಭಟ್ಟಾಚಾರ್ಯ
"ನನ್ನ ನೈಜ ಮಿತ್ರ " ಎಂದು ಕಣ್ಣೀರು ಹಾಕಿ ಆಝಾದ್ ರನ್ನು ರಾಜ್ಯಸಭೆಯಿಂದ ಬೀಳ್ಕೊಟ್ಟಿದ್ದರು ಪ್ರಧಾನಿ ಮೋದಿ
ಹೊಸದಿಲ್ಲಿ, ಜ.25: ಮಂಗಳವಾರ ಪ್ರಕಟವಾದ ಪದ್ಮ ಪ್ರಶಸ್ತಿ ಪಟ್ಟಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಝಾದ್ ಹಾಗು ಸಿಪಿಎಂ ಹಿರಿಯ ನಾಯಕ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರು ಪದ್ಮಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನ ಹಿರಿಯ ನಾಯಕ ಹಾಗು ಮಾಜಿ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಗುಲಾಮ್ ನಬಿ ಆಝಾದ್ ಅವರು ಇತ್ತೀಚಿಗೆ ಕಾಂಗ್ರೆಸ್ ನಲ್ಲಿ ಬಂಡಾಯ ಗುಂಪಿನ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿದ್ದರು. ರಾಹುಲ್ ನಾಯಕತ್ವ ಪ್ರಶ್ನಿಸಿ ಪತ್ರ ಬರೆದ ಜಿ 23 ಎಂದೇ ಗುರುತಿಸಿಕೊಂಡಿದ್ದ 23 ನಾಯಕರಲ್ಲಿ ಆಝಾದ್ ಅವರು ಪ್ರಮುಖರಾಗಿದ್ದರು. ಅವರ ರಾಜ್ಯಸಭೆಯ ಅವಧಿ ಮುಗಿದಾಗ ಪ್ರಧಾನಿ ಮೋದಿ ಅವರು ಆಝಾದ್ ಅವರು " ನನ್ನ ನಿಜವಾದ ಮಿತ್ರ " ಎಂದು ಬಣ್ಣಿಸಿ ಕುರಿತು ಮಾತನಾಡುವಾಗ ಕಣ್ಣೀರು ಹಾಕಿದ್ದು ಭಾರೀ ಸುದ್ದಿಯಾಗಿತ್ತು. ಇದೀಗ ಆಝಾದ್ ದೇಶದ ಮೂರನೇ ಅತ್ಯುನ್ನತ ನಾಗರೀಕ ಪ್ರಶಸ್ತಿ ಪಡೆದಿದ್ದಾರೆ .
ಜ್ಯೋತಿ ಬಸು ಬಳಿಕ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿಯಾದ ಸಿಪಿಎಂ ನ ಪ್ರಭಾವಿ ನಾಯಕ ಬಳಿಕ ಮಮತಾ ಬ್ಯಾನರ್ಜಿ ಅಲೆ ಎದುರು ಪಕ್ಷ ಸೋತ ಮೇಲೆ ತೆರೆಮರೆಗೆ ಸರಿದಿದ್ದರು. ಈಗ ಅವರು ತೀವ್ರ ಅನಾರೋಗ್ಯದಿಂದಿದ್ದಾರೆ. ಮಂಗಳವಾರ ಪದ್ಮಭೂಷಣ ಪ್ರಶಸ್ತಿ ಪಟ್ಟಿಯಲ್ಲಿ ಅವರು ಸ್ಥಾನ ಪಡೆದಿದ್ದಾರೆ.