'ಅತ್ಯಾಚಾರ ಸಂತ್ರಸ್ತೆಯ' ಕೂದಲು ಕತ್ತರಿಸಿ ಮೆರವಣಿಗೆ ನಡೆಸಿ ವಿಕೃತಿ ಮೆರೆದ ಮಹಿಳೆಯರು
Photo: Twitter/@SwatiJaiHind
ಹೊಸದಿಲ್ಲಿ: ಅತ್ಯಾಚಾರ ಸಂತ್ರಸ್ತೆ ಎಂದು ತಿಳಿಯಲಾದ ಯುವತಿಯನ್ನು ಕೂದಲು ಕತ್ತರಿಸಿ, ಮುಖಕ್ಕೆ ಕಪ್ಪು ಬಣ್ಣ ಬಳಿದು ಆಕೆಯ ನೆರೆಹೊರೆಯ ಮಹಿಳೆಯರೇ ಮೆರವಣಿಗೆ ಮಾಡಿ ವಿಕೃತಿ ಮೆರೆದ ಆಘಾತಕಾರಿ ಘಟನೆ ಪೂರ್ವ ದಿಲ್ಲಿಯ ಶಾಹದರ ಪ್ರದೇಶದಿಂದ ವರದಿಯಾಗಿದೆ.
ಈ ಘಟನೆಯನ್ನು ಮಹಿಳಾ ಆಯೋಗವೂ ಗಂಭೀರವಾಗಿ ಪರಿಗಣಿಸಿದೆ. ಪೊಲೀಸರು ನಾಲ್ಕು ಮಂದಿ ಮಹಿಳೆಯರನ್ನು ಈ ಪ್ರಕರಣ ಸಂಬಂಧ ಬಂಧಿಸಿದ್ದಾರೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ ಎಂದು ndtv.com ವರದಿ ಮಾಡಿದೆ.
ಆದರೆ ಈ ಕುರಿತು ಪ್ರತಿಕ್ರಿಯಿಸಿದ ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಲ್, 20 ವರ್ಷದ ಯುವತಿಯನ್ನು ಅಕ್ರಮ ಮದ್ಯ ಮಾರಾಟಗಾರರು ಸಾಮೂಹಿಕ ಅತ್ಯಾಚಾರಗೈದಿದ್ದಾರೆ ಎಂದು ಆರೋಪಿಸಿದ್ದಾರೆ.
ಯುವತಿಯ ಮೇಲೆ ಕಣ್ಣಿಟ್ಟಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ನಂತರ ಆತನ ಸಾವಿಗೆ ಆಕೆಯನ್ನು ದೂರಿ ಯುವಕನ ಕುಟುಂಬ ಆಕೆಯ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.
ವಿವಾಹಿತಳಾಗಿರುವ ಸಂತ್ರಸ್ತೆಗೆ ಒಂದು ಮಗುವಿದೆ. ಯುವಕನ ಸಾವಿನ ನಂತರ ಆಕೆ ನವೆಂಬರ್ 12ರಂದು ಬಾಡಿಗೆ ಮನೆಗೆ ಸ್ಥಳಾಂತರಗೊಂಡಿದ್ದರು ಎಂದು ವರದಿಯಾಗಿದೆ.
कस्तूरबा नगर में 20 साल की लड़की का अवैध शराब बेचने वालों द्वारा गैंगरेप किया गया, उसे गंजा कर, चप्पल की माला पहना पूरे इलाक़े में मुँह काला करके घुमाया। मैं दिल्ली पुलिस को नोटिस जारी कर रही हूँ। सब अपराधी आदमी औरतों को अरेस्ट किया जाए और लड़की और उसके परिवार को सुरक्षा दी जाए। pic.twitter.com/4ExXufDaO3
— Swati Maliwal (@SwatiJaiHind) January 27, 2022