ʼಒಮೈಕ್ರಾನ್ʼಗಿಂತ ʼಓ-ಮಿತ್ರೋಂʼ ತುಂಬಾ ಅಪಾಯಕಾರಿ ವೈರಸ್: ಶಶಿ ತರೂರ್ ವ್ಯಂಗ್ಯ
ತಿರುವನಂತಪುರಂ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ವ್ಯಂಗ್ಯವಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಸೋಮವಾರ ಕೋವಿಡ್ -19 ರ ಓಮಿಕ್ರಾನ್ ರೂಪಾಂತರಕ್ಕಿಂತ 'ಓ ಮಿತ್ರೋಂ' ಹೆಚ್ಚು ಅಪಾಯಕಾರಿ ಎಂದು ಹೇಳಿದ್ದಾರೆ.
"ಧ್ರುವೀಕರಣ, ದ್ವೇಷ ಮತ್ತು ಧರ್ಮಾಂಧತೆಯ ಪ್ರಚಾರ, ಸಂವಿಧಾನದ ಮೇಲಿನ ದಾಳಿಗಳು ಹೆಚ್ಚುತ್ತಿವೆ, ಇದರ ಪರಿಣಾಮವಾಗಿ ಪ್ರಜಾಪ್ರಭುತ್ವ ದುರ್ಬಲಗೊಳ್ಳುತ್ತಿದೆ” ಎಂದು ಅವರು ಹೇಳಿದ್ದಾರೆ.
“#Omicron ಗಿಂತ ತುಂಬಾ ಅಪಾಯಕಾರಿ "O Mitron"! ಹೆಚ್ಚುತ್ತಿರುವ ಧ್ರುವೀಕರಣ, ದ್ವೇಷ ಮತ್ತು ಧರ್ಮಾಂಧತೆಯ ಪ್ರಚಾರ, ಸಂವಿಧಾನದ ಮೇಲಿನ ದಾಳಿಗಳು ನಮ್ಮ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವುದರ ಪರಿಣಾಮಗಳನ್ನು ನಾವು ಪ್ರತಿದಿನ ಕಾಣುತ್ತಿದ್ದೇ. ಈ ವೈರಸ್ನ ಯಾವುದೇ ʼಸೌಮ್ಯ ರೂಪಾಂತರʼ ಇಲ್ಲ.” ಎಂದು ತರೂರ್ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ತರೂರ್ ಅವರ ವ್ಯಂಗ್ಯವನ್ನು ಟೀಕಿಸಿದ್ದು, ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ರಾಜಕೀಯದಿಂದ ಕಾಂಗ್ರೆಸ್ ಹೊರತುಪಡಿಸಬಹುದೇ? ಎಂದು ಪ್ರಶ್ನಿಸಿದ್ದಾರೆ.
“ಕಾಂಗ್ರೆಸ್ ರಾಜಕೀಯಕ್ಕಿಂತ ಮಿಗಿಲಾಗಿ ಸಾಂಕ್ರಾಮಿಕ ರೋಗವನ್ನು ಕಾಣಬಹುದೇ? ಮೊದಲು ಕಾಂಗ್ರೆಸ್ ಲಸಿಕೆ ಕುರಿತು ಅಪಪ್ರಚಾರ ಮಾಡಿತು ಈಗ ಅದು ಒಮೈಕ್ರಾನ್ ಅಪಾಯಕಾರಿ ಅಲ್ಲ ಎಂದು ಹೇಳುತ್ತದೆ. ಕೋವಿಡ್ 19 ರ ಆರಂಭದಲ್ಲಿ ಅಖಿಲೇಶ್ ಸಿಎಎ ಕೋವಿಡ್ಗಿಂತ ಹೆಚ್ಚು ಅಪಾಯಕಾರಿ ಎಂದು ಹೇಳಿದ್ದರು. ಈ ಜನರಿಗೆ ಜವಾಬ್ದಾರಿಯ ಪ್ರಜ್ಞೆ ಇಲ್ಲವೇ? ” ಎಂದು ಪೂನಾವಾಲಾ ಟ್ವೀಟ್ ಮಾಡಿದ್ದಾರೆ.
ಧ್ರುವೀಕರಣದ ವಿಚಾರವಾಗಿ ತರೂರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಜನವರಿ 29 ರಂದು, ತರೂರ್ ಯೋಗಿ ಆದಿತ್ಯನಾಥ್ ಅವರ ವೀಡಿಯೊವನ್ನು ಹಂಚಿಕೊಂಡಿದ್ದು, ಧಾರ್ಮಿಕ ಧ್ರುವೀಕರಣದ ವಿರುದ್ಧ ಆರೋಪ ಮಾಡಿದ್ದಾರೆ, ಅವರು (ಆದಿತ್ಯನಾಥ್) ದೇಶಕ್ಕೆ ಎಷ್ಟು ಹಾನಿ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿಗೆ ತಿಳಿದಿಲ್ಲ ಎಂದು ಶಶಿ ತರೂರ್ ಹೇಳಿದ್ದಾರೆ.