ಶ್ರೀನಗರದಲ್ಲಿ ಎನ್ಕೌಂಟರ್: ಇಬ್ಬರು ಉಗ್ರರ ಹತ್ಯೆ
ಶ್ರೀನಗರ,ಫೆ.5: ಭದ್ರತಾಪಡೆಗಳು ಶನಿವಾರ ಶ್ರೀನಗರದಲ್ಲಿ ನಡೆಸಿದ ಎನ್ಕೌಂಟರ್ ನಲ್ಲಿ ಲಷ್ಕರೆ ತಯ್ಯಬಾದ ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ.
ನಗರದ ಝಕುರಾ ಪ್ರದೇಶದಲ್ಲಿ ಉಗ್ರರು ಅವಿತುಕೊಂಡಿದ್ದಾರೆಂಬ ನಿರ್ದಿಷ್ಟ ಮಾಹಿತಿ ಲಭ್ಯವಾದ ಬೆನ್ನಲ್ಲೇ ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರಿದವು ಹಾಗೂ ಶೋಧ ಕಾರ್ಯಾಚರಣೆಯನ್ನು ನಡೆಸಿದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಉಗ್ರರು ಮರೆಯಲ್ಲಿ ನಿಂತು ಭದ್ರತಾಪಡೆಗಳ ಮೇಲೆ ಗುಂಡು ಹಾರಿಸಿದ್ದರು. ಆಗ ಭದ್ರತಾಪಡೆಗಳು ಪ್ರತಿದಾಳಿ ನಡೆಸಿದ್ದು, ಸಂಘರ್ಷದಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆಂದು ಅವರು ಹೇಳಿದ್ದಾರೆ.
ಹತ್ಯೆಯಾದ ಉಗ್ರರು ಲಷ್ಕರೆ ತಯ್ಯೆಬಾದ ಛಾಯಾಸಂಸ್ಥೆಯಾದ ದಿ ರೆಸಿಸ್ಟಾನ್ಸ್ ಫ್ರಂಟ್ (ಟಿಆರ್ಎಫ್)ಗೆ ಸೇರಿದವರೆಂದು ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ವಿಜಯ ಕುಮಾರ್ ತಿಳಿಸಿದ್ದಾರೆ. ಹತನಾದ ಉಗ್ರರಲ್ಲೊಬ್ಬ ಜನವರಿ 29ರಂದು ಆನಂತ್ನಾಗ್ನಲ್ಲಿ ನಡೆದ ಹೆಡ್ ಕಾನ್ಸ್ಟೇಬಲ್ ಅಲಿ ಮುಹಮ್ಮದ್ ನ ಹತ್ಯೆಯಲ್ಲಿ ಶಾಮೀಲಾಗಿದ್ದನೆಂದು ಅವರು ಹೇಳಿದ್ದಾರೆ.
ಎನ್ಕೌಂಟರ್ ನಡೆದ ಸ್ಥಳದಲ್ಲಿ ಎರಡು ಪಿಸ್ತೂಲ್ ಗಳು ಸೇರಿದಂತೆ ಶಸ್ತ್ರಾಸ್ತಗಳು ಪತ್ತೆಯಾಗಿವೆ ಎಂದು ಕುಮಾರ್ ತಿಳಿಸಿದ್ದಾರೆ.