ಉತ್ತರಪ್ರದೇಶದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ಮನೆ ಬಾಗಿಲಿಗೆ ಉಚಿತ ಗ್ಯಾಸ್ ಸಿಲಿಂಡರ್: ಅಮಿತ್ ಶಾ
ಲಕ್ನೊ: ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷಗಳವರೆಗೆ ರೈತರು ವಿದ್ಯುತ್ ಬಿಲ್ ಪಾವತಿಸಬೇಕಾಗಿಲ್ಲ ಎಂದು ಭಾರತೀಯ ಜನತಾ ಪಕ್ಷದ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಆಶ್ವಾಸನೆ ನೀಡಿದ್ದಾರೆ.
ಉತ್ತರ ಪ್ರದೇಶದ ದಿಬಿಯಾಪುರದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ, " 18 ರಂದು (ಮಾರ್ಚ್)ಹೋಳಿ, 10 ರಂದು ಮತ ಎಣಿಕೆ, 10 ರಂದು ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತನ್ನಿ, ಮಾರ್ಚ್ 18 ರಂದು ನಿಮ್ಮ ಮನೆಬಾಗಿಲಿಗೆ ಉಚಿತ ಗ್ಯಾಸ್ ಸಿಲಿಂಡರ್ಗಳು ತಲುಪುತ್ತವೆ. ಯಾವುದೇ ರೈತ ಮುಂದಿನ ಐದು ವರ್ಷಗಳ ವಿದ್ಯುತ್ ಬಿಲ್ ಪಾವತಿಸಬೇಕಾಗಿಲ್ಲ'' ಎಂದರು.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ವಿಶ್ವಾಸವನ್ನು ವ್ಯಕ್ತಪಡಿಸಿದ ಶಾ, ಮೊದಲ ಹಾಗೂ ಎರಡನೇ ಹಂತದ ಚುನಾವಣೆಯ ನಂತರ ಸಮಾಜವಾದಿ ಪಕ್ಷವನ್ನು ರಾಜ್ಯದಿಂದ ನಿರ್ನಾಮ ಮಾಡಲಾಗಿದೆ ಎಂದು ಹೇಳಿದರು.
"ಸಮಾಜವಾದಿ ಪಕ್ಷವನ್ನು ಅಳಿಸಿ ಹಾಕಲಾಗಿದೆ. ಪಶ್ಚಿಮ ಉತ್ತರ ಪ್ರದೇಶವು 300 ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಬಿಜೆಪಿ ಸರ್ಕಾರಕ್ಕೆ ಅಡಿಪಾಯ ಹಾಕುವ ಕೆಲಸವನ್ನು ಮಾಡಿದೆ. ಮೂರನೇ ಹಂತದಲ್ಲಿ ಈ ಬಹುಮತವನ್ನು ಹೆಚ್ಚಿಸಬೇಕಾಗಿದೆ," ಎಂದು ಅವರು ಹೇಳಿದರು.