ಉವೈಸಿ ಮೇಲೆ ಗುಂಡಿನ ದಾಳಿ ನಡೆಸಿದವರ ಕುಟುಂಬದ ಬೆಂಬಲಕ್ಕೆ ನಿಂತ ಬಿಜೆಪಿ ನಾಯಕ
ಆರೋಪಿಗಳ ಕುಟುಂಬಕ್ಕೆ 'ನ್ಯಾಯಯುತ ತನಿಖೆಯ ಭರವಸೆ'
ಬಿಜೆಪಿ ನಾಯಕ ಸುನೀಲ್ ಭರಾಲ (Twitter/Pt Sunil Bharala)
ಲಕ್ನೋ: ಎಐಎಂಐಎಂ ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಉವೈಸಿ ಅವರ ಕಾರಿನತ್ತ ಗುಂಡು ಹಾರಿಸಿದ ಪ್ರಕರಣದ ಇಬ್ಬರು ಆರೋಪಿಗಳಿಗೆ ಉತ್ತರ ಪ್ರದೇಶದ ಬಿಜೆಪಿ ನಾಯಕ ಸುನೀಲ್ ಭರಾಲ ಬೆಂಬಲ ವ್ಯಕ್ತಪಡಿಸಿದ್ದಾರೆ.
ಘಟನೆ ಕುರಿತಂತೆ “ನ್ಯಾಯಯುತ ತನಿಖೆ'' ನಡೆಸುವ ಭರವಸೆಯನ್ನು ಆರೋಪಿಗಳಾದ ಸಚಿನ್ ಶರ್ಮ ಮತ್ತು ಶುಭಂ ಅವರ ಕುಟುಂಬಗಳಿಗೆ ಸುನೀಲ್ ಭರಾಲ ನೀಡಿದ್ದಾರೆ. ಉತ್ತರ ಪ್ರದೇಶ ಕಾರ್ಮಿಕ ಕಲ್ಯಾಣ ಮಂಡಳಿಯ ಅಧ್ಯಕ್ಷರಾಗಿರುವ ಸುನೀಲ್ ರಾಜ್ಯದಲ್ಲಿ ಸಚಿವ ಸ್ಥಾನಮಾನವನ್ನು ಹೊಂದಿದ್ದಾರೆ.
ಬುಧವಾರ ಸುನೀಲ್ ಅವರು ಆರೋಪಿ ಸಚಿನ್ ಶರ್ಮ ನಿವಾಸಕ್ಕೆ ಭೇಟಿ ನೀಡಿ ಇಬ್ಬರ ಕುಟುಂಬಗಳಿಗೂ ಬೆಂಬಲ ವ್ಯಕ್ತಪಡಿಸಿದ್ದಾರೆ.
“ನಾವು ಸಚಿನ್ ಶರ್ಮ ಮತ್ತು ಶುಭಂ ಅವರ ಕುಟುಂಬಗಳ ಜತೆಗೆ ಸರ್ವರೀತಿಯಲ್ಲಿಯೂ ಇದ್ದೇವೆ, ನಾವು ಅವರಿಗೆ ಸಂಪೂರ್ಣ ಸಹಕಾರ ನೀಡಲಿದ್ದೇವೆ. ಘಟನೆಯ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಿದೆ,'' ಎಂದು ಸುನೀಲ್ ಭರಾಲ ಟ್ವೀಟ್ ಮಾಡಿದ್ದಾರೆ.
“ಸಚಿನ್ ಶರ್ಮ ನಿರಪರಾಧಿ, ಆತನ ಕುಟುಂಬ ಅನ್ಯಾಯ ಎದುರಿಸುವಂತಾಗಿದೆ,'' ಎಂದು ಸುನೀಲ್ ಭರಾಲ ಹೇಳಿದ್ದಾರೆ.
“ಉವೈಸಿ ಅವರು ಹಿಂದುಗಳನ್ನು ನಿಂದಿಸುತಿದ್ದಾರೆ. ಪೊಲೀಸರನ್ನು ದೂರವಿರಿಸಿದರೆ ನೋಡಿಕೊಳ್ಳುವುದಾಗಿ ಹೇಳಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಎಚ್ಚರಿಕೆ ನೀಡುತ್ತಾ ಬಂದಿದ್ದಾರೆ. ಇದು ಅವರ (ಉವೈಸಿ) ಸಂಚಿನಂತೆ ತೋರುತ್ತಿದೆ,'' ಎಂದು ಸುನೀಲ್ ಭರಾಲ ಹೇಳಿದ್ದಾರೆ. ಆದರೆ ಈ ಹೇಳಿಕೆಯನ್ನು ಉವೈಸಿ ಎಲ್ಲಿ ನೀಡಿದ್ದರೆಂದು ಅವರು ತಿಳಿಸಿಲ್ಲ.
ಉವೈಸಿ ಕಾರಿನ ಮೇಲಿನ ದಾಳಿ ಘಟನೆ ಫೆಬ್ರವರಿ 3ರಂದು ಉತ್ತರ ಪ್ರದೇಶದ ಹಾಪುರ್ನಲ್ಲಿ ನಡೆದಿತ್ತು. ಈ ಘಟನೆ ನಂತರ ಸರಕಾರ ಅವರಿಗೆ ಝೆಡ್ ಶ್ರೇಣಿ ಭದ್ರತೆ ನೀಡಲು ಮುಂದೆ ಬಂದಿದ್ದರೂ ಅವರು ಅದನ್ನು ನಿರಾಕರಿಸಿದ್ದರು.