ಉಕ್ರೇನ್ ಬಿಕ್ಕಟ್ಟು: ಇಂದೇ ರಾಜಧಾನಿ ಕೀವ್ ತೊರೆಯುವಂತೆ ನಾಗರಿಕರಿಗೆ ಭಾರತ ಸೂಚನೆ; ವರದಿ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ, ಮಾ. 1: ರೈಲು ಅಥವಾ ಲಭ್ಯ ಇರುವ ಇತರ ಯಾವುದೇ ಸಂಚಾರ ವ್ಯವಸ್ಥೆ ಬಳಸಿ ತುರ್ತಾಗಿ ಇಂದೇ ಉಕ್ರೇನ್ ನ ರಾಜಧಾನಿ ಕೀವ್ ಅನ್ನು ತೊರೆಯಿರಿ ಎಂದು ಭಾರತ ತನ್ನ ಪ್ರಜೆಗಳಲ್ಲಿ ಆಗ್ರಹಿಸಿದೆ. ‘‘ಇಂದು ತುರ್ತಾಗಿ ಕೀವ್ ಅನ್ನು ತೊರೆಯುವಂತೆ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಭಾರತೀಯ ಪ್ರಜೆಗಳಿಗೆ ಸಲಹೆ ನೀಡಲಾಗಿದೆ. ಇದಕ್ಕಾಗಿ ಲಭ್ಯವಿರುವ ರೈಲು ಅಥವಾ ಇತರ ಯಾವುದೇ ಸಂಚಾರ ವ್ಯವಸ್ಥೆ ಬಳಸಲು ಸೂಚಿಸಲಾಗಿದೆ’’ ಎಂದು ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಟ್ವೀಟ್ ಮಾಡಿದೆ.
ಕೀವ್ನ ವಾಯುವ್ಯ ರಸ್ತೆಗಳಲ್ಲಿ ರಶ್ಯ ಸೇನಾ ವಾಹನಗಳ ದೀರ್ಘ ವ್ಯೆಹವನ್ನು ಪ್ರದರ್ಶಿಸುವ ಉಪಗ್ರಹ ಚಿತ್ರ ಬಿಡುಗಡೆಯಾದ ಗಂಟೆಗಳ ಬಳಿಕ ಭಾರತದ ರಾಯಭಾರಿ ಕಚೇರಿ ಈ ಸಲಹೆಯನ್ನು ಪೋಸ್ಟ್ ಮಾಡಿದೆ. ಅಮೆರಿಕ ಮೂಲದ ಬಾಹ್ಯಾಕಾಶ ತಂತ್ರಜ್ಞಾನ ಕಂಪೆನಿ ಬಿಡುಗಡೆ ಮಾಡಿದ ಈ ಚಿತ್ರಗಳಲ್ಲಿ ನೂರಾರು ಟ್ಯಾಂಕ್ ಗಳು, ಪಿರಂಗಿಗಳು, ಶಸ್ತ್ರಸಜ್ಜಿತ ಹಾಗೂ ಲಾಜಿಸ್ಟಿಕ್ ವಾಹನಗಳು ಕಂಡು ಬಂದಿವೆ. ಪ್ರಸ್ತುತ ಉಕ್ರೇನ್ ನಲ್ಲಿ ಸುಮಾರು 16,000 ಭಾರತೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ.
ರಷ್ಯಾ ಸೇನೆ ಕಳೆದ ಗುರುವಾರ ದಾಳಿ ಆರಂಭಿಸಿದ ಬಳಿಕ ತಾವು ಆಶ್ರಯ ಪಡೆದುಕೊಂಡಿರುವ ಭೂಗತ ಬಂಕರ್, ಮೆಟ್ರೋ ಸ್ಟೇಷನ್ ಹಾಗೂ ಬಾಂಬ್ ಶೆಲ್ಟರ್ಗಳ ವೀಡಿಯೊ ಹಾಗೂ ಫೋಟೊಗಳನ್ನು ಹಲವು ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದುವರೆಗೆ ಸುಮಾರು 8,000 ಭಾರತೀಯ ಪ್ರಜೆಗಳನ್ನು ತೆರವುಗೊಳಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಸೋಮವಾರ ಹೇಳಿದೆ. ಭಾರತೀಯ ರಾಯಭಾರಿ ಕಚೇರಿ ಸೋಮವಾರ ಕೀವ್ ನಲ್ಲಿರುವ ರೈಲು ನಿಲ್ದಾಣಕ್ಕೆ ತೆರಳುವಂತೆ ವಿದ್ಯಾರ್ಥಿಗಳಿಗೆ ಸೋಮವಾರ ಸೂಚಿಸಿತ್ತು.
ಜನರನ್ನು ಪಶ್ಚಿಮ ವಲಯಕ್ಕೆ ಕರೆದೊಯ್ಯಲು ಅಲ್ಲಿ ಉಕ್ರೇನ್ ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ ಎಂದು ಅದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿತ್ತು. ‘‘ಎಲ್ಲ ಭಾರತೀಯ ಪ್ರಜೆಗಳು ಹಾಗೂ ವಿದ್ಯಾರ್ಥಿಗಳು ಶಾಂತಿಯುತವಾಗಿ ಹಾಗೂ ಸಂಘಟಿತರಾಗಿ ಇರುವಂತೆ ನಾವು ಪ್ರಮಾಣಿಕವಾಗಿ ವಿನಂತಿಸುತ್ತೇವೆ. ರೈಲು ನಿಲ್ದಾಣಗಳಲ್ಲಿ ದೊಡ್ಡ ಜನಸಂದಣಿ ನಿರೀಕ್ಷಿಸಲಾಗಿದೆ. ಆದುದರಿಂದ ಎಲ್ಲ ವಿದ್ಯಾರ್ಥಿಗಳು ತಾಳ್ಮೆಯಿಂದ, ಸಂಯಮದಿಂದ ಇರಬೇಕು. ವಿಶೇಷವಾಗಿ ಆಕ್ರಮಣಕಾರಿ ನಡವಳಿಕೆ ತೋರಿಸಬಾರದು’’ ಎಂದು ಅದು ಸಲಹೆ ನೀಡಿದೆ.
‘ತೆರವು ಕಾರ್ಯಾಚರಣೆಗೆ ಕೈ ಜೋಡಿಸುವಂತೆ ವಾಯು ಪಡೆಗೆ ಪ್ರಧಾನಿ ಸೂಚನೆ’
ಯುದ್ಧ ಪೀಡಿತ ಉಕ್ರೇನ್ನಿಂದ ಭಾರತದ ಪ್ರಜೆಗಳನ್ನು ತೆರವುಗೊಳಿಸಲು ನೆರವು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ವಾಯು ಪಡೆಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ‘‘ನಮ್ಮ ವಾಯು ಪಡೆಯ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳುವುದರಿಂದ ಕಡಿಮೆ ಸಮಯದಲ್ಲಿ ಹೆಚ್ಚು ಜನರನ್ನು ಸ್ಥಳಾಂತರಿಸಬಹುದು. ಇದು ಮಾನವೀಯ ನೆಲೆಯ ನೆರವನ್ನು ಹೆಚ್ಚು ಪರಿಣಾಮಕಾರಿಯಾಗಿ ತಲುಪಿಸಲು ಸಹಾಯ ಮಾಡುತ್ತದೆ’’ ಎಂದು ಮೂಲಗಳು ತಿಳಿಸಿವೆ.
ಆಪರೇಷನ್ ಗಂಗಾ ಕಾರ್ಯಕ್ರಮದ ಭಾಗವಾಗಿ ಭಾರತೀಯ ವಾಯು ಪಡೆ ಹಲವು ಸಿ-17 ವಿಮಾನಗಳನ್ನು ನಿಯೋಜಿಸುವ ಸಾಧ್ಯತೆ ಇದೆ. ಇಂದು ಬೆಳಗ್ಗೆ 182 ಮಂದಿ ಭಾರತೀಯರಿದ್ದ ವಿಮಾನ ಮುಂಬೈಯಲ್ಲಿ ಇಳಿದಿದೆ. ಉಕ್ರೇನ್ ತನ್ನ ವಾಯು ಯಾನ ಪ್ರದೇಶವನ್ನು ಮುಚ್ಚಿದ್ದುದರಿಂದ ವಿಮಾನಗಳು ರಾಜಧಾನಿ ಬುಕಾರೆಸ್ಟ್ ಮೂಲಕ ಸಂಚರಿಸಿ.