ಭೀಮಾ ಕೋರೆಗಾಂವ್ ಪ್ರಕರಣ: ತಾಯಿಯನ್ನು ಭೇಟಿಯಾಗಲು ಆನಂದ್ ತೇಲ್ತುಂಬ್ಡೆಗೆ ಹೈಕೋರ್ಟ್ ಅನುಮತಿ
ಮುಂಬೈ, ಫೆ. 2: ಭೀಮಾ ಕೋರೆಗಾಂವ್-ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಮಾನವ ಹಕ್ಕು ಹೋರಾಟಗಾರ ಹಾಗೂ ಲೇಖಕ ಆನಂದ್ ತೆಲ್ತುಂಬ್ಡೆ ಅವರಿಗೆ ಮಹಾರಾಷ್ಟ್ರದ ಚಂದ್ರಪುರದಲ್ಲಿರುವ ತನ್ನ ವೃದ್ಧೆ ತಾಯಿಯನ್ನು 2022 ಮಾರ್ಚ್ 8ರಂದು ಭೇಟಿಯಾಗಲು ಬಾಂಬೆ ಉಚ್ಚ ನ್ಯಾಯಾಲಯ ಬುಧವಾರ ಅನುಮತಿ ನೀಡಿದೆ.
ಆನಂದ್ ತೇಲ್ತುಂಬ್ಡೆ ಅವರ ಸಹೋದರ ಹಾಗೂ ಮಾವೋವಾದಿ ಕೇಂದ್ರ ಸಮಿತಿಯ ಸದಸ್ಯ ಎಂದು ಹೇಳಲಾದ ಮಿಲಿಂದ್ ತೇಲ್ತುಂಬ್ಡೆ ಅವರನ್ನು 2021 ನವೆಂಬರ್ 13ರಂದು ಗಡ್ಚಿರೋಳಿಯಲ್ಲಿ ನಡೆದ ಎನ್ಕೌಂಟರ್ ನಲ್ಲಿ ಹತ್ಯೆಗೈಯಲಾಗಿತ್ತು.
ತಾಂತ್ರಿಕ ನೆಲೆಯ ತನ್ನ ಮನವಿಯನ್ನು ವಿಶೇಷ ಎನ್ಐಎ ನ್ಯಾಯಾಲಯ ತಿರಸ್ಕರಿಸಿದ ಬಳಿಕ ಮಧ್ಯಂತರ ಜಾಮೀನಿಗೆ ನಿರ್ದೇಶನ ನೀಡುವಂತೆ ಕೋರಿ ಆನಂದ ತೇಲ್ತುಂಬ್ಡೆ ಅವರು ಬಾಂಬೆ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು.
ನ್ಯಾಯಮೂರ್ತಿಗಳಾದ ಸುನೀಲ್ ಶುಕ್ರೆ ಹಾಗೂ ಜಿ.ಜೆ. ಸನಪ್ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಆನಂದ ತೇಲ್ತುಂಬ್ಡೆ ಅವರು ಸಲ್ಲಿಸಿದ ಮನವಿ ಪರಿಗಣಿಸಿದೆ ಹಾಗೂ ಆನಂದ ತೇಲ್ತುಂಬ್ಡೆ ಅವರನ್ನು ಮಾರ್ಚ್ 8ರಂದು ಅಪರಾಹ್ನ ಪೊಲೀಸ್ ಬೆಂಗಾವಲಿನಲ್ಲಿ ಚಂದ್ರಪುರಕ್ಕೆ ಕರೆದೊಯ್ಯುವಂತೆ ನಿರ್ದೇಶನ ನೀಡಿದೆ. ಆದರೆ, ರಾತ್ರಿ ಮನೆಯಲ್ಲಿ ತಂಗಲು ಅನುಮತಿ ನಿರಾಕರಿಸಿದೆ.