ಮಣಿಪುರದಲ್ಲಿ ನಿಲ್ಲದ ಚುನಾವಣಾ ಹಿಂಸಾಚಾರ: 12 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಆದೇಶ
PHOTO PTI
ಗುವಾಹಟಿ,ಮಾ.4: ಮಣಿಪುರದಲ್ಲಿ ಚುನಾವಣಾ ಹಿಂಸಾಚಾರ ಮುಂದುವರಿದಿದೆ. ಬುಧವಾರ ರಾತ್ರಿ ಸುಗ್ನು ವಿಧಾನಸಭಾ ಕ್ಷೇತ್ರದ ಕಾಕ್ಚಿಂಗ್ ಖುನೊವು ಎಂಬಲ್ಲಿ ಆಡಳಿತ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಬೆಂಬಲಿಗರ ನಡುವೆ ಘರ್ಷಣೆಗಳು ನಡೆದಿದ್ದು,ಡಝನ್ಗೂ ಅಧಿಕ ವಾಹನಗಳು ಮತ್ತು ಪೀಠೋಪಕರಣಗಳು ಹಾನಿಗೀಡಾಗಿವೆ.
ಭಾರೀ ಸಂಖ್ಯೆಯಲ್ಲಿದ್ದ ಬಿಜೆಪಿ ಬೆಂಬಲಿಗರು ಕಾಂಗ್ರೆಸ್ ಶಿಬಿರದ ಮೇಲೆ ದಾಳಿ ನಡೆಸಿದಾಗ ಹಿಂಸಾಚಾರ ಭುಗಿಲೆದ್ದಿತ್ತು.
ತನ್ನ ಬೆಂಬಲಿಗರ ಮೇಲಿನ ದಾಳಿಗಳು ಪಕ್ಷವು ಅಧಿಕಾರಕ್ಕೆ ಮರಳಲಿದೆ ಎನ್ನುವುದನ್ನು ಸೂಚಿಸುತ್ತಿವೆ ಎಂದು ರಾಜ್ಯ ಕಾಂಗ್ರೆಸ್ನ ವಕ್ತಾರ ಭೂಪೇಂದ್ರ ಮೈಟಿ ಹೇಳಿದರು.
ಫೆ.28ರಂದು ಮತದಾನ ನಡೆದಿದ್ದ ಚುರಾಚಾಂದಪುರ,ಇಂಫಾಲ ಪೂರ್ವ ಮತ್ತು ಕಾಂಗ್ಪೊಕ್ಪಿ ಜಿಲ್ಲೆಗಳ ಐದು ವಿಧಾನಸಭಾ ಕ್ಷೇತ್ರಗಳಲ್ಲಿಯ 12 ಮತಗಟ್ಟೆಗಳಲ್ಲಿ ಮಾ.5ರಂದು ಮರುಮತದಾನಕ್ಕೆ ಚುನಾವಣಾ ಆಯೋಗವು ಆದೇಶಿಸಿದೆ. ಅಂದೇ 22 ವಿಧಾನಸಭಾ ಕ್ಷೇತ್ರಗಳಲ್ಲಿ ಎರಡನೇ ಮತ್ತು ಅಂತಿಮ ಹಂತದ ಮತದಾನ ನಡೆಯಲಿದೆ.
ಈ ಮೊದಲು,ಮತಗಟ್ಟೆಗಳನ್ನು ವಶಪಡಿಸಿಕೊಳ್ಳಲು ಮತ್ತು ಮತದಾರರಿಗೆ ಬೆದರಿಕೆಯನ್ನೊಡ್ಡಲು ಉಗ್ರಗಾಮಿ ಸಂಘಟನೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ಮತ್ತು ಪ್ರತಿಪಕ್ಷಗಳು ಪರಸ್ಪರರ ವಿರುದ್ಧ ಆರೋಪಗಳನ್ನು ಮಾಡಿದ್ದವು.