ಗುರುಗ್ರಾಮ: ಧರ್ಮನಿಂದನೆಗೈದು ಇಬ್ಬರು ಯುವಕರಿಗೆ ಥಳಿಸಿದ ಅಪರಿಚಿತ ದುಷ್ಕರ್ಮಿಗಳು; ಆರೋಪ
ಗುರುಗ್ರಾಮ(ಹರ್ಯಾಣ),ಮಾ.8: ಇಲ್ಲಿ ರವಿವಾರ ರಾತ್ರಿ ಅಪರಿಚಿತ ವ್ಯಕ್ತಿಗಳು ಇಬ್ಬರು ಮುಸ್ಲಿಮರನ್ನು ಥಳಿಸಿದ್ದಾರೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.
ಬಿಹಾರ ನಿವಾಸಿ ಅಬ್ದುರ್ ರಹ್ಮಾನ್ ಮತ್ತು ಅವರ ಸ್ನೇಹಿತ ಮುಹಮ್ಮದ್ ಅಝಂ ಅವರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು ಧಾರ್ಮಿಕ ನಿಂದನೆಯನ್ನು ಮಾಡಿದ್ದರು ಮತು ಅವರಿಗೆ ಹಂದಿ ಮಾಂಸ ತಿನ್ನಿಸುವ ಬಗ್ಗೆಯೂ ಮಾತನಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಸೆಕ್ಟರ್ 45ರಲ್ಲಿರುವ ರಮಡಾ ಹೋಟೆಲ್ ಬಳಿ ಈ ಘಟನೆ ನಡೆದಿದೆ. ಮದ್ರಸಕ್ಕಾಗಿ ಚಂದಾ ಸಂಗ್ರಹಿಸಿದ ಬಳಿಕ ಬೈಕ್ನಲ್ಲಿ ಚಕ್ಕರ್ಪುರ ಗ್ರಾಮಕ್ಕೆ ತೆರಳುತ್ತಿದ್ದಾಗ ಹೋಟೇಲ್ ಬಳಿ ಕೆಲಸಮಯ ನಿಲ್ಲಿಸಿದ್ದೆವು. ಈ ಸಂದರ್ಭ ಬಿಳಿಯ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳ ಪೈಕಿ ಓರ್ವ ತಮ್ಮನ್ನು ಪ್ರಶ್ನಿಸಿದ್ದ. ಬಳಿಕ ಆತ ತನ್ನ ಸಹಚರನನ್ನು ಕರೆದಿದ್ದು,ಇಬ್ಬರೂ ಸೇರಿಕೊಂಡು ತಮ್ಮನ್ನು ಥಳಿಸಿದ್ದಾರೆ. ತಮ್ಮ ಮೊಬೈಲ್ ಫೋನ್ಗಳು ಮತ್ತು ಬೈಕನ್ನು ಕಸಿದುಕೊಂಡಿದ್ದು, ಅವರಲ್ಲೋರ್ವ ಕಾರಿನಿಂದ ಬಿಳಿಯ ಹುಡಿಯೊಂದನ್ನು ತಂದು ಬಲವಂತದಿಂದ ಅಝಂ ಬಾಯಲ್ಲಿ ತುರುಕಿದ್ದ ಎಂದು ರಹ್ಮಾನ್ ದೂರಿನಲ್ಲಿ ಆರೋಪಿಸಿದ್ದಾರೆ.
ಘಟನಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ,ಘಟನಾ ಸ್ಥಳದ ಬಳಿ ನಿಲ್ಲಿಸಿದ್ದ ಬೈಕ್ ಪತ್ತೆಯಾಗಿದೆ ಎಂದು ತಿಳಿಸಿದ ಪೊಲೀಸರು,ಓರ್ವ ಅರೋಪಿಯನ್ನು ಅಮಿತ್ ಎಂದು ಗುರುತಿಸಲು ಸಾಧ್ಯವಾಗಿದೆ ಎಂದರು.