ಪಂಜಾಬ್: ಬುಧವಾರ ಮುಖ್ಯಮಂತ್ರಿಯಾಗಿ ಭಗವಂತ ಮಾನ್ ಪ್ರಮಾಣವಚನ ಸ್ವೀಕಾರ
PHOTO PTI
ಚಂಡಿಗಡ,ಮಾ.13: ಪಂಜಾಬಿನ ನಿಯೋಜಿತ ಮುಖ್ಯಮಂತ್ರಿ,ಆಪ್ನ ಭಗವಂತ ಮಾನ್ ಅವರು ಮಾತ್ರ ಬುಧವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರ ಸಂಪುಟದ ಪ್ರಮಾಣವಚನ ಸ್ವೀಕಾರ ನಂತರದಲ್ಲಿ ನಡೆಯಲಿದೆ ಎಂದು ಪಕ್ಷದ ಮೂಲಗಳು ರವಿವಾರ ತಿಳಿಸಿವೆ.
ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ ಅವರ ಹುಟ್ಟೂರು ಖಟ್ಕರ್ಕಲನ್ನಲ್ಲಿ ಮಾನ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.ಅರವಿಂದ ಕೇಜ್ರಿವಾಲ್ ನೇತೃತ್ಬದ ಆಪ್ ಪಂಜಾಬಿನಲ್ಲಿ 92 ಸ್ಥಾನಗಳನ್ನು ಗಳಿಸುವ ಮೂಲಕ ಆಡಳಿತ ಕಾಂಗ್ರೆಸ್,ಅಕಾಲಿ ದಳ ಮತ್ತು ಬಿಜೆಪಿಯನ್ನು ಗುಡಿಸಿಹಾಕಿದೆ. 2017ರಲ್ಲಿ 20 ಸ್ಥಾನಗಳನ್ನು ಗಳಿಸಿದ್ದ ಆಪ್ನ ಮತಗಳಿಕೆ ಪ್ರಮಾಣ ಶೇ.42.4ರಷ್ಟು ಭಾರೀ ಏರಿಕೆಯನ್ನು ಕಂಡಿದೆ.
ಫಲಿತಾಂಶ ಘೋಷಣೆಯ ಬಳಿಕ ಮಾನ್,ತಮ್ಮ ಕ್ಷೇತ್ರಗಳಲ್ಲಿ ಗರಿಷ್ಠ ಸಮಯವನ್ನು ಕಳೆಯುವಂತೆ ಮತ್ತು ಸಚಿವ ಸ್ಥಾನಕ್ಕಾಗಿ ರಾಜಧಾನಿಯಲ್ಲಿ ಠಿಕಾಣಿ ಹೂಡದಂತೆ ಪಕ್ಷದ ನಾಯಕರಿಗೆ ನಿರ್ದೇಶ ನೀಡಿದ್ದರು.ಮಾನ್ ಶನಿವಾರ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ ಅವರನ್ನು ಭೇಟಿಯಾಗಿ ಸರಕಾರ ರಚನೆಗೆ ಹಕ್ಕು ಮಂಡಿಸಿದ್ದರು.