ದಿಲ್ಲಿಯ 3 ನಗರಪಾಲಿಕೆಗಳ ವಿಲೀನಕ್ಕೆ ಲೋಕಸಭೆಯಲ್ಲಿ ಮಸೂದೆ ಮಂಡನೆ
ಹೊಸದಿಲ್ಲಿ, ಮಾ. 25: ದಿಲ್ಲಿಯ ಮೂರು ನಗರ ಪಾಲಿಕೆಗಳನ್ನು ವಿಲೀನಗೊಳಿಸುವ ಮಸೂದೆಯನ್ನು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಲಾಯಿತು. ಈ ನಡೆ ಶಾಸಕಾಂಗದ ಸಾಮರ್ಥ್ಯವನ್ನು ಮೀರಿದೆ ಎಂದು ಪ್ರತಿಪಕ್ಷಗಳು ಪ್ರತಿಪಾದಿಸಿದ ನಡುವೆಯೇ ಮಸೂದೆ ಮಂಡಿಸಲಾಗಿದೆ.
ಪ್ರತಿಪಕ್ಷಗಳ ಪ್ರತಿಪಾದನೆ ತಳ್ಳಿ ಹಾಕಿದ ಕೇಂದ್ರದ ಸಹಾಯಕ ಸಚಿವ ನಿತ್ಯಾನಂದ ರಾಯ್, ದಿಲ್ಲಿ ನಗರ ಪಾಲಿಕೆ (ತಿದ್ದುಪಡಿ) ಮಸೂದೆ-2022 ಅನ್ನು ಮಂಡಿಸಿದರು. ಕೇಂದ್ರಾಡಳಿತ ಪ್ರದೇಶಗಳ ಯಾವುದೇ ವಿಷಯಕ್ಕೆ ಸಂಬಂಧಿಸಿ ಕಾನೂನು ರೂಪಿಸುವ ಹಕ್ಕನ್ನು ಸಂವಿಧಾನದ ವಿಧಿ 239 ಎ ಸಂಸತ್ತಿಗೆ ನೀಡಿದೆ ಎಂದು ರಾಯ್ ಹೇಳಿದರು.
ಆರ್ಎಸ್ಪಿ ಸದಸ್ಯ ಎನ್.ಕೆ. ಪ್ರೇಮಚಂದ್ರನ್, ಕಾಂಗ್ರೆಸ್ ಸದಸ್ಯ ಗೌರವ್ ಗೊಗೋಯಿ ಹಾಗೂ ಮನೀಶ್ ತಿವಾರಿ, ಬಿಎಸ್ಪಿ ಸದಸ್ಯ ರಿತೇಶ್ ಪಾಂಡೆ ಮಸೂದೆ ಮಂಡನೆಗೆ ವಿರೋಧ ವ್ಯಕ್ತಪಡಿಸಿದರು.
ದಿಲ್ಲಿಯ ನಗರ ಪಾಲಿಕೆಯನ್ನು ತ್ರಿವಿಭಾಗ ಮಾಡುವ ಮಸೂದೆಯನ್ನು ದಿಲ್ಲಿ ವಿಧಾನ ಸಭೆಯಲ್ಲಿ ಅಂಗೀಕರಿಸಲಾಗಿತ್ತು. ನಗರ ಪಾಲಿಕೆಗಳನ್ನು ವಿಲೀನಗೊಳಿಸಲು ಕಾಯ್ದೆ ಅಂಗೀಕರಿಸುವುದು ಸಂಸತ್ತಿನ ವ್ಯಾಪ್ತಿಗೆ ಮೀರಿದುದಾಗಿದೆ ಎಂದು ಪ್ರೇಮಚಂದ್ರ ಅವರು ಹೇಳಿದರು.
ಸಂಸತ್ತಿನ ಕಾನೂನಿನ ಮೂಲಕ ಮೂರು ನಗರ ಪಾಲಿಕೆಗಳನ್ನು ವಿಲೀನಗೊಳಿಸುವ ಕೇಂದ್ರ ಸರಕಾರದ ನಡೆ ಸಂವಿಧಾನ ಒಕ್ಕೂಟ ವ್ಯವಸ್ಥೆ ಮೇಲಿನ ದಾಳಿ ಎಂದು ಗೌರವ್ ಗೊಗೋಯಿ ಹೇಳಿದರು.